ಮೂಡುಬಿದಿರೆ, ಜ. 03 (DaijiworldNews/MB) : ಕೊರೊನಾ ಕಾರಣ ಜಿಲ್ಲಾಧಿಕಾರಿಗಳು ರಾತ್ರಿ ಕಂಬಳಕ್ಕೆ ಸಮ್ಮತಿ ಸೂಚಿಸದ ಕಾರಣ ಹಗಲಲ್ಲೇ ಎರಡು ದಿನಗಳಲ್ಲಿ ಕಂಬಳ ನಡೆಸಲು ದ.ಕ. ಜಿಲ್ಲಾ ಕಂಬಳ ಸಮಿತಿ ಶನಿವಾರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಸಾಲಿನ ಮೊದಲ ಕಂಬಳ ಜ.30 ಮತ್ತು 31ರಿಂದ ಹೊಕ್ಕಾಡಿಗೋಳಿಯಲ್ಲಿ ವೀರ ವಿಕ್ರಮ ಜೋಡುಕರೆ ಕಂಬಳ ನಡೆಯಲಿದ್ದು ಕೊನೆಯ ಕಂಬಳ ಮಾರ್ಚ್ 20ರಂದು ವೇಣೂರು ಪೆರ್ಮಡ ಸೂರ್ಯ ಚಂದ್ರ ಕಂಬಳ ನಡೆಯಲಿದೆ. ಹೊಕ್ಕಾಡಿಗೋಳಿ (ಜ. 30, 31), ಐಕಳ ಬಾವ (ಫೆ. 6, 7), ವಾಮಂಜೂರು ತಿರುವೈಲುಗುತ್ತು (ಫೆ. 13, 14). ಮೂಡುಬಿದಿರೆ (ಫೆ. 20, 21), ಮಿಯ್ನಾರು (ಫೆ. 27, 28). ಬಂಗ್ರಕೂಳೂರು (ಮಾ. 6, 7), ವೇಣೂರು ಪೆರ್ಮುಡ (ಮಾ. 20, 21) ಕಂಬಳ ಸೇರಿದಂತೆ 7 ಕಂಬಳಗಳ ದಿನಾಂಕ ಘೋಷಿಸಲಾಗಿದೆ.
ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಕೊಳಕ್ಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಗೌರವ ಸಲಹೆಗಾರರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.