ವಿಟ್ಲ, ಜ. 04 (DaijiworldNews/MB) : ವಿಟ್ಲ ವಲಯ ಎಸ್ಡಿಪಿಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.





ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆನ್ನಲಾಗಿದೆ.
ಕಚೇರಿಯ ಮುಂಭಾಗದ ಬಾಗಿಲಿನ ಭಾಗಕ್ಕೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೈಂಟ್ ಡಬ್ಬಗಳು ಪತ್ತೆಯಾಗಿದ್ದು, ಪೈಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ಕಚೇರಿಯ ಮುಂಭಾಗ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಡಿಪಿಐ ಮುಖಂಡ ಕಲಂದರ್ ಪರ್ತಿಪ್ಪಾಡಿ ಹಾಗೂ ಶಾಕೀರ್ ಅಳಕೆಮಜಲು ಅವರು, ''ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್ಡಿಪಿಐ ಬೆಂಬಲಿತರು ಅಭೂತಪೂರ್ವ ಗೆಲವು ಸಾಧಿಸಿದ್ದರು. ಇದಾದ ಬಳಿಕ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಪಕ್ಷವನ್ನು ಕುಗ್ಗಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು'' ಎಂದು ಆಗ್ರಹಿಸಿದ್ದಾರೆ.