ಬಂಟ್ವಾಳ, ಜ 04 (DaijiworldNews/SM): ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2020ನೇ ಸಾಲಿನ ಜಾನಪದ ಪ್ರಶಸ್ತಿಗೆ ಕಲ್ಲಡ್ಕ ಶಿಲ್ಪಾಗೊಂಬೆ ಬಳಗದ ಕಲಾವಿದ ಗೋಪಾಲ ಬಂಗೇರ ಆಯ್ಕೆಯಾಗಿದ್ದಾರೆ.


ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ನಿವಾಸಿಗಳಾದ ಜಾರಪ್ಪ ಪೂಜಾರಿ ಮತ್ತು ಮೋನಮ್ಮ ದಂಪತಿಯ ಪುತ್ರ ಗೋಪಾಲಕೃಷ್ಣ ಬಂಗೇರ ಗ್ರಾಮೀಣ ಪ್ರದೇಶದ ಸಾಹಸ ಮನೋರಂಜನೆಯ ಸೈಕಲ್ ಬ್ಯಾಲೆನ್ಸ್ ಮೂಲಕ ಸಾಮಾಜಿಕ ಬದುಕಿಗೆ ಮುನ್ನುಡಿ ಬರೆದವರು. ಬಳಿಕ ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್ ನಲ್ಲಿ ಕೆಲವು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಇವರು ಕಳೆದ 25 ವರ್ಷಗಳಿಂದ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಸಕ್ರೀಯ ಕಲಾವಿದನಾಗಿ ಸೇರಿ ಇದುವರೆಗೂ ಕೀಲು ಕುದುರೆಯ ರಾಜವೇಷಧಾರಿಯಾಗಿದ್ದಾರೆ.
ಕಲೆಯಲ್ಲಿ ನಿಷ್ಠೆ, ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ಬದ್ಧತೆ ಮೈಗೂಡಿಸಿಕೊಂಡು ಬಂದಿರುವ ಇವರು ತನ್ನ ವಿಶೇಷ ವೇಷಭೂಷಣ, ವಿಶಿಷ್ಟ ಶೈಲಿಯ ನಡಿಗೆ, ತಾಳಕ್ಕೆ ತಕ್ಕ ನರ್ತನದೊಂದಿಗೆ ಪಾತ್ರಕ್ಕೆ ಜೀವ ತುಂಬುತ್ತಾ, ಪ್ರೇಕ್ಷಕರ ಮನಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ತಂಡದೊಳಗಿನ ಕಲಾವಿದರಿಗೆ ಮಾರ್ಗದರ್ಶನವನ್ನೂ ನೀಡುತ್ತಾ ಬಂದಿದ್ದಾರೆ.
ಶಿಲ್ಪಾ ಗೊಂಬೆ ಬಳಗದ ಮೂಲಕ ಮೈಸೂರು ದಸರಾ, ಮಂಗಳೂರು ದಸರಾ, ಹಂಪಿ ಉತ್ಸವ, ವಿಶ್ವ ತುಳು ಸಮ್ಮೆಳನ, ವಿಶ್ವ ನುಡಿಸಿರಿ ವಿರಾಸತ್, ವಿಶ್ವ ಕನ್ನಡ ಸಮ್ಮೆಳನ, ವಿಶ್ವ ಕೊಂಕಣಿ ಸಮ್ಮೆಳನ, ಮುಂಬಯಿ, ಕೇರಳ ಸಹಿತ ನಾಡಿನ ನಾನಾ ಕಡೆ ನಡೆದ ಸಾವಿರಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ರಾಜವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದಾರೆ. ಇವರು, ರಂಗ್, ಒರಿಯರ್ದೊರಿ ಅಸಲ್ ತುಳು ಚಿತ್ರಗಳು, ಕನ್ನಡ ಧಾರಾವಾಹಿ ಸಹಿತ ಸಿನಿಮಾಗಳಲ್ಲಿ ನಡೆದ ಗೊಂಬೆ ಕುಣಿತಗಳ ಪ್ರದರ್ಶನದಲ್ಲೂ ರಾಜನಾಗಿ ಮಿಂಚಿ ಗಮನ ಸೆಳೆದಿದ್ದಾರೆ.