ಉಡುಪಿ, ಜ.07 (DaijiworldNews/PY): ಇತ್ತೀಚಿಗೆ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ವಿಜಯೋತ್ಸವವು ಕನ್ನರ್ಪಾಡಿ, ಕಟ್ಟೆಗುಡ್ಡೆ, ಕುತ್ಪಾಡಿ, ಕಡೆಕಾರ್ ಮಾರ್ಗವಾಗಿ ಮೆರವಣಿಗೆ ಮೂಲಕ ಸೀಬ್ರಿಜ್ಗೆ ತಲುಪಿ ಅಭಿನಂದನಾ ಸಭೆ ಜರಗಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, "ಕಡೆಕಾರ್ ಪಂಚಾಯತ್ ನಾಗರಿಕರು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಚುನಾಯಿಸಿದ್ದಾರೆ. ಕಡೆಕಾರ್ ಪಂಚಾಯತನ್ನು ಮಾದರಿ ಪಂಚಾಯತ್ ಆಗಿ ಅಭಿವೃದ್ಧಿ ಪಡಿಸುವ ಮಹತ್ತರ ಜವಾಬ್ದಾರಿ ಚುನಾಯಿತ ಸದಸ್ಯರ ಮೇಲಿದೆ" ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್ ಮಾತನಾಡುತ್ತಾ, "ಚುನಾಯಿತ ಸದಸ್ಯರು ಕಡೆಕಾರ್ ಗ್ರಾಮ ಪಂಚಾಯತ್ನಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುವ ಮೂಲಕ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು" ಎಂದು ಚುನಾಯಿತ ಸದಸ್ಯರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ವನಜಾ ಜಯಕರ್, ತಾರಾನಾಥ ಸುವರ್ಣ, ಸತೀಶ್ ಕೋಟ್ಯಾನ್, ನವೀನ್ ಶೆಟ್ಟಿ, ವೀಕ್ಷಕ ಸುಕೇಶ್ ಕುಂದರ್, ಚಂದ್ರಮೋಹನ್, ಆಕಾಶ್, ಎಸ್.ಸಿ. ಘಟಕದ ಬ್ಲಾಕ್ ಅಧ್ಯಕ್ಷ ಗಣೇಶ್ ನೆರ್ಗಿ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಚುನಾಯಿತ ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಜತಿನ್ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.