ವಿಟ್ಲ,ಜ.10 (DaijiworldNews/HR): ತೋಟದಲ್ಲಿ ಮಕ್ಕಳು ಆಟ ಆಡುತ್ತಿದ್ದ ವೇಳೆ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಎ ಅವರ ಪುತ್ರಿ ಸರಪುನ್ನಿಸಾ(4) ಎಂದು ಗುರುತಿಸಲಾಗಿದೆ.
ಕೊಳ್ನಾಡು ಗ್ರಾಮ ಬಾರೆಬೆಟ್ಟು ನಿವಾಸಿ ಹಂಝ ಅವರ ಮಕ್ಕಳಾದ ರಸೀದ್, ಬದ್ರುದ್ದೀನ್ ಅವರ ಜತೆ ಸರಪುನ್ನಿಸಾ ಅವರು ಅಬ್ಬಾಸ್ ಬಾಕಿಮಾರು ರವರ ತೋಟಕ್ಕೆ ಆಟ ಆಡಲು ತೆರಳಿದ್ದರು. ಆಡುತ್ತಿರುವಾಗ ಮೂವರ ಪೈಕಿ ಸರಪುನ್ನಿಸಾ ತೋಟದ ಮದ್ಯದಲ್ಲಿದ್ದ ಕೆರೆಗೆ ಕಾಲು ಜಾರಿ ಬಿದ್ದಿದ್ದಾಳೆ. ಈ ಬಗ್ಗೆ ರಸೀದ್, ಬದ್ರುದ್ದೀನ್ ಅವರು ಓಡಿಕೊಂಡು ಬಂದು ಮನೆಯಲ್ಲಿ ತಿಳಿಸಿದ್ದಾರೆ.
ಮನೆಮಂದಿ ತೋಟದ ಮದ್ಯದಲ್ಲಿದ್ದ ಕೆರೆಯ ಬಳಿಗೆ ಹೋದಾಗ ಮಗಳು ನೀರಿನಲ್ಲಿ ಮುಳುಗಿರುವುದನ್ನು ಕಂಡು ಮಗಳನ್ನು ನೀರಿನಿಂದ ಹೊರಗೆ ತೆಗೆದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಬಂದಾಗ ವೈದ್ಯಾದಿಕಾರಿಯವರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.