ಮಂಗಳೂರು, ಜ.15 (DaijiworldNews/HR): ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಜನವರಿ 14 ರಂದು ಪದವಿನಂಗಡಿ ಬಳಿಯ ಕೊಂಚಾಡಿಯಲ್ಲಿರುವ ಮಹಾಲಸಾ ದೇಗುಲದ ಎದುರು ಬಾಲಕನನ್ನು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.

ಬುಧವಾರ ಸಂಜೆ 7 ಗಂಟೆ ಸುಮಾರಿಗೆ 7 ರಿಂದ 11 ವರ್ಷದೊಳಗಿನ ಮೂವರು ಬಾಲಕರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದ್ದು ಬಾಲಕರ ಬಳಿ ನಿಲ್ಲಿಸಿ, ಓರ್ವನ ಮೇಲೆ ಗೋಣಿ ಚೀಲದ ಮುಸುಕು ಹಾಕಿ ಹಿಡಿಯಲು ಯತ್ನಿಸಿದ್ದಾರೆ. ಜತೆಗಿದ್ದ ಬಾಲಕ ಶಿವಂ ಕಾಮತ್ ಎಂಬಾತ ಅಲ್ಲಿಯೇ ಸಿಕ್ಕಿದ ಕಲ್ಲು, ಮಣ್ಣಿನಿಂದ ದಾಳಿ ನಡೆಸಿ, ಬೊಬ್ಬೆ ಹಾಕಿ ಪರಿಸರದವರನ್ನು ಕರೆದ ಈ ಹಂತದಲ್ಲಿ ದುಷ್ಕರ್ಮಿಗಳು ಸಿಕ್ಕಿ ಬೀಳುವ ಅಪಾಯದಿಂದ ಕೂಡಲೇ ಅಲ್ಲಿಂದ ಪರಾರಿಯಾದರು.
ಘಟನೆಗೆ ಸಂಬಂಧಿಸಿದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸ್ ಉಪ ಆಯುಕ್ತ ಹರಿರಾಂ ಶಂಕರ್, ಕಂಕನಾಡಿ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಾಲಕರಿಂದ ಘಟನೆಯ ವಿವರಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿಂದಲೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಆರಂಭದಲ್ಲಿ ಬಾಲಕರ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಅಪಹರಣದ ನಡೆದಿರುವುದನ್ನು ನಂಬಲಿಲ್ಲ, ಬಳಿಕ ಸಿಸಿಟಿವಿ ಕ್ಯಾಮೆರಾ ತುಣುಕನ್ನು ಪರಿಶೀಲಿಸಿದಾಗ ಬಾಲಕರು ವಿವರಿಸಿದಂತೆ ಘಟನೆ ನಿಜಕ್ಕೂ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಾಲಕ ಶಿವಂ ಕಾಮತ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯ ಕುರಿತು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.