ಮಂಗಳೂರು, ಜ.20 (DaijiworldNews/PY): ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ ನಗರದಲ್ಲಿ ಜ.20ರ ಬುಧವಾರದಂದು ನಡೆಯಿತು.
















ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ ದಿನವನ್ನು ಬೀದಿಬದಿ ವ್ಯಾಪಾರಿಗಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಿತು.
ಸಂಘದ ಗೌರವಾಧ್ಯಕ್ಷರು ಮತ್ತು ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಝ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, "ಬೀದಿ ಬದಿ ವ್ಯಾಪಾರ ಸಮಾಜದ ಮತ್ತು ವ್ಯವಸ್ಥೆಯ ಒಂದು ಭಾಗ. ಬೀದಿಬದಿ ವ್ಯಾಪಾರಿಗಳ ಸಂಘಟಿತ ಹೋರಾಟದಿಂದ ದೇಶದಲ್ಲಿ ಕಾನೂನು ಮತ್ತು ನೀತಿ ಜಾರಿಗೆ ಬಂದಿರುವುದು. ಈ ಕಾನೂನು ಜಾರಿಗೆ ಬಂದಿರುವುದರಿಂದ ಬೀದಿಬದಿ ವ್ಯಾಪಾರಿಗಳು ಘನತೆಯಿಂದ ಬದುಕುವಂತಾಗಿದೆ. ಮಂಗಳೂರು ನಗರದಲ್ಲೂ ಅನೇಕ ಸಮರ ಧೀರ ಹೋರಾಟಗಳು ನಡೆದಿವೆ. ನಗರದಲ್ಲಿ 598 ಜನರಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಲಾಗಿದೆ. ಮಹಾ ನಗರ ಪಾಲಿಕೆ ಮುಂದಿನ ಬಜೆಟ್ನಲ್ಲಿ ಪ್ರತಿ ವಾರ್ಡ್ಗೆ ಒಂದು ಬೀದಿಬದಿ ವ್ಯಾಪಾರ ವಲಯ ಘೋಷಣೆ ಮಾಡಿ ಹಣ ಮೀಸಲಿಡಬೇಕು" ಎಂದು ಆಗ್ರಹಿಸಿದರು.
ನಗರದಲ್ಲಿ ಸಂಘದ ಹಲವು ಘಟಕಗಳ ಬೀದಿ ಬದಿ ವ್ಯಾಪಾರಸ್ಥರು ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.
ಇಂಡಿಯನ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಸಿದರು. ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ, ಸುರತ್ಕಲ್ನಲ್ಲಿ ಹೆಚ್ಐವಿ ಪಾಸಿಟಿವ್ ಮಕ್ಕಳ ಆಶ್ರಮಕ್ಕೆ ಆಹಾರ ನೀಡಿದರು. ಕಂಕನಾಡಿ, ಸ್ಟೇಟ್ ಬ್ಯಾಂಕ್ ಮತ್ತು ಹಂಪನಕಟ್ಟೆ ಬಳಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
ಸಂಘ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದರು. ಪ್ರೊ. ರೀಟಾ ನೋರೋನ್ಹಾಅತಿಥಿಗಳಾಗಿ ಭಾಗವಹಿಸಿದರು. ಮಹಾ ನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾದ ಮೊಹಮ್ಮದ್ ಆಸಿಫ್, ಸಿದ್ದಮ್ಮ, ಎಮಿಲಿ ಡಿಸೋಜ, ಜನೆಟ್ ಡಿಸೋಜಾ, ಅಬೂಬಕ್ಕರ್ ಸಿದ್ದಿಕ್, ಲಕ್ಷ್ಮಿ, ಮಾರುತಿ ಹಾಗೂ ಸಂಘದ ಉಪಾಧ್ಯಕ್ಷ ಹಸನ್ ಕುದ್ರೋಳಿ, ಶ್ರೀಧರ ಭಂಡಾರಿ, ಹಿತೇಶ್, ರವಿ ಪೂಜಾರಿ, ಆದಮ್ ಬಜಾಲ್ ನೌಶಾದ್ ಉಳ್ಳಾಲ್, ಅಣ್ಣಯ್ಯ ಕುಲಾಲ್, ಹಸನ್ ಮಾಡೂರ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.