ಉಡುಪಿ, ಫೆ.04 (DaijiworldNews/PY): ಉಡುಪಿ ಜಿಲ್ಲೆಯ ಉದ್ಯಾವರದ ಕಲ್ಸಂಕ ಎಂಬ ಪ್ರದೇಶದಲ್ಲಿ ನಾರಾಯಣ ಪೂಜಾರಿ ಅವರ ಜಾಗದಲ್ಲಿ ರಸ್ತೆ ಅಗಲೀಕರಣ ಸಂದರ್ಭ ಸರಕಾರಿ ಪದವಿ ಪೂರ್ವ ಕಾಲೇಜು-ಹೆಜಮಾಡಿ ಇಲ್ಲಿನ ದೈಹಿಕ ಶಿಕ್ಷಕ ಅಲ್ವಿನ್ ಅಂದ್ರಾದೆ ಅವರು ಶಾಸನವನ್ನು ಪತ್ತೆ ಮಾಡಿದ್ದಾರೆ.


ಈ ಶಾಸನವನ್ನು ಪರಿಶೀಲಿಸಿದ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು, "ಇದು 7ನೇ ಶತಮಾನದ ಆಳುಪರ ಶಾಸನ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಗ್ನಿ ಶಿಲೆಯಿಂದ ಕೊರೆಯಲ್ಪಟ್ಟ ಈ ಶಾಸನವು 3 ಅಡಿ ಎತ್ತರವನ್ನು ಹೊಂದಿದ್ದು, ಶಿಲೆಯ ಎರಡು ಭಾಗದಲ್ಲಿ ಶಾಸನವನ್ನು ಬರೆಯಲಾಗಿದೆ. ಶಾಸನದ ಒಂದು ಮಗ್ಗುಲಲ್ಲಿ 5 ಸಾಲುಗಳಿದ್ದು, ಇನ್ನೊಂದು ಮಗ್ಗುಲಲ್ಲಿ 6 ಸಾಲುಗಳಿವೆ. 7ನೇ ಶತಮಾನದ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಕೊನೆಯಲ್ಲಿ ನಿರಿದ ಕಲ್ಲು ಎಂಬ ಉಲ್ಲೇಖವಿದೆ. ಹಾಗಾಗಿ ಈ ಶಾಸನವನ್ನು ಯಾವುದೋ ಘಟನೆಯ ನೆನಪಿಗಾಗಿ ಹಾಕಿರಬಹುದು ಮತ್ತುಈ ಶಾಸನದ ಹೆಚ್ಚಿನ ಅಧ್ಯಯನವನ್ನು ಮಾಡಬೇಕಿದೆ" ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ತಿಳಿಸಿದ್ದಾರೆ
ಈ ಕ್ಷೇತ್ರಕಾರ್ಯ ಶೋಧನೆಯ ಸಂದರ್ಭ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಹಾಗೂ ಮಂಜುನಾಥ ಆಚಾರ್ಯ ಪಳ್ಳಿ ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ.