ಉಳ್ಳಾಲ, ಫೆ. 04 (DaijiworldNews/SM): ಇಲ್ಲಿನ ಕೋಟೆಪುರ ಸಮುದ್ರ ತೀರದಲ್ಲಿ ತಲೆಗೆ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಮೃತದೇಹ ಇದೀಗ ಕೊಲೆ ಎಂಬುವುದಾಗಿ ಸಾಬೀತಾಗಿದೆ.

ಯುವಕನ ಸಹೋದರ ನೀಡಿರುವ ದೂರಿನ ಆಧಾರದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮೃತನ ಜತೆಗಿದ್ದ ಯುವಕನೋರ್ವನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ತಲಪಾಡಿ ಸಾಂತ್ಯ ಮಾರುಜಾಗ ನಾರಾಯಣ ಭಂಡಾರಿ ಎಂಬವರ ಪುತ್ರ ತಿತೇಶ್ ಭಂಡಾರಿ(28) ಹತ್ಯೆಯಾದವರು. ಬುಧವಾರ ಮಧ್ಯಾಹ್ನ ವೇಳೆ ತಿತೇಶ್ ಅವರ ಮೃತದೇಹ ಕೋಟೆಪುರದ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಮೃತದೇಹದ ತಲೆಯಲ್ಲಿ ಅಲ್ಲಲ್ಲಿ ಗಾಯಗಳಾಗಿದ್ದು, ಪೊಲೀಸರು ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸಹೋದರನ ಸುದ್ಧಿ ತಿಳಿಯುತ್ತಿದ್ದಂತೆ ಠಾಣೆಗೆ ಆಗಮಿಸಿದ ನಿತ್ಯಾನಂದ ಭಂಡಾರಿ ಎಂಬವರು ಮಂಗಳವಾರ ಮಧ್ಯಾಹ್ನ ವೇಳೆ ಸಹೋದರನನ್ನು ಯಾರೋ ಹತ್ಯೆ ನಡೆಸಿದ್ದಾರೆಂದು ಕನ್ನಡ ಭಾಷೆಯಲ್ಲಿ ಮಾತನಾಡಿ ಕರೆಯೊಂದು ಬಂದಿರುವುದನ್ನು ತಿಳಿಸಿದ್ದಾರೆ.
ಅದರಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿತೇಶ್ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಇವರ ಜತೆಗಿದ್ದ ರಮೇಶ್ ಎಂಬಾತ ನಾಪತ್ತೆಯಾಗಿದ್ದಾನೆ. ಆತನೇ ಹತ್ಯೆ ನಡೆಸಿ ತಲೆಮರೆಸಿಕೊಂಡಿರುವ ಸಾಧ್ಯತೆಗಳನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹತ್ಯೆಗೀಡಾದ ತಿತೇಶ್ ವಿರುದ್ಧ ತಲಪಾಡಿ ಸೆಲೂನಿನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಾರಂಟ್ ಜಾರಿಯಾಗಿತ್ತು. ತದನಂತರ ತಲಪಾಡಿಯ ತನ್ನ ಮನೆಗೆ ತೆರಳದೆ ತಿತೇಶ್ ಉಳ್ಳಾಲದಲ್ಲಿಯೇ ಇದ್ದರು. ಈ ಬಗ್ಗೆ ಮನೆಮಂದಿಗೂ ತಿತೇಶ್ ಮಾಹಿತಿ ನೀಡದೇ ಸಂಪರ್ಕದಲ್ಲೇ ಇರಲಿಲ್ಲ. ಮೃತರು ವಿವಾಹಿತರೂ ಆಗಿದ್ದರು.