ಬಂಟ್ವಾಳ, ಫೆ.05 (DaijiworldNews/PY): "ತಾ.ಪಂ.ನಿಂದ ಬಿಡುಗಡೆಯಾದ ಕೋಟಿ ಅನುದಾನಗಳ ಕಾಮಗಾರಿಗಳು ಫೆಬ್ರವರಿ ಅಂತ್ಯದೊಳಗೆ ಮುಗಿಯಬೇಕು" ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧಿಕಾರಿಗಳಿಗೆ ಸೂಚಿಸಿದರು.



ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದರು.
"ಕಾರ್ಮಿಕ ಇಲಾಖೆಯಿಂದ ಸಿಗುವ ಪಿಂಚಣಿ ಯೋಜನೆ ಸರಿಯಾಗಿ ಫಲಾನುಭವಿಗಳಿಗೆ ಸಿಗುವಂತಾಗಲು ಪ್ರತಿ ಗ್ರಾಮ ಪಂಚಾಯತ್ಗಳಿಗೆ ಅಧಿಕಾರಿಗಳು ತೆರಳಿ ಸರಿಯಾಗಿ ಮಾಹಿತಿ ನೀಡಬೇಕು" ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಸರಕಾರದ ವಿವಿಧ ಮಾಸಾಶನಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂಬ ಅನೇಕ ಫಲಾನುಭವಿಗಳ ದೂರುಗಳು ಬಂದಿದ್ದು, ಈ ಬಗ್ಗೆ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದ ತಾ.ಪಂ ಅಧ್ಯಕ್ಷರು ಈ ಬಗ್ಗೆ ಕ್ರಮಕೈಗೊಳ್ಳುವ ವಿಚಾರದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
"ಕೊರೊನಾ ಬಳಿಕ ತಾಲೂಕಿನ ಎಲ್ಲಾ ಹಾಸ್ಟೆಲ್ಗಳು ಪ್ರಾರಂಭವಾಗಿವೆ" ಎಂದು ಸಮಾಜ ಕಲ್ಯಾಣ ಅಧಿಕಾರಿ ಸಭೆಯಲ್ಲಿ ತಿಳಿಸಿದರು.
ಮೆಸ್ಕಾಂ ಇಲಾಖೆ ಸಭೆಯಲ್ಲಿ ಗೈರು ಹಾಜರಾಗಿದ್ದ ಬಗ್ಗೆ ಗರಂ ಆದ ಅಧ್ಯಕ್ಷರು, "ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಸಹಿತ ಅನೇಕ ಇಲಾಖೆ ಮಾಸಿಕ ಕೆಡಿಪಿ ಸಭೆಯ ರಿಪೋರ್ಟ್ ಕೊಟ್ಟಿಲ್ಲ ಯಾಕೆ?" ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಟಾರ್ಗೆಟ್ ತಕ್ಕಂತೆ ಅನುದಾನ ಬಿಡುಗಡೆಯಾದ ಹಣವನ್ನು ನಿಗದಿತ ಅವದಿಯಲ್ಲಿ ಖರ್ಚು ಮಾಡಿ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸುವಂತೆ ತಾ.ಪಂ.ಇ.ಒ.ರಾಜಣ್ಣ ತಿಳಿಸಿದರು.
ಉಪಾಧ್ಯಕ್ಷ ಅಬ್ಬಾಸ್ ಆಲಿ ಸಭೆಯಲ್ಲಿ ಮಾತನಾಡಿ, "ಖಾಸಗಿ ಶಾಲೆಗಳ ದಾಖಲಾತಿ ಸಂದರ್ಭ ಪಡಯುವ ಶುಲ್ಕದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿದೆ. ಆದರೆ ಕೆಲವು ಶಾಲೆಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಎಲ್ಲಾ ಶಾಲೆಗಳಲ್ಲಿ ಸರಕಾರದ ಆದೇಶಗಳು ಅನುಷ್ಠಾನ ಮಾಡಬೇಕು" ಎಂದು ಶಿಕ್ಷಣ ಇಲಾಖೆಯ ಬಿ.ಇ.ಒ.ಜ್ಞಾನೇಶ್ ಅವರಿಗೆ ತಿಳಿಸಿದರು.