ಮಂಗಳೂರು, ಫೆ.17 (DaijiworldNews/MB) : "ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ಕೇಸು ಹಾಕಿ ಹೆದರಿಸುವ ಪರಿಪಾಠ ಹೆಚ್ಚುತ್ತಿದ್ದು ಇಂತಹ ಕೇಸುಗಳಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.




ರೈತ ಹೋರಾಟ ಬೆಂಬಲಿಸಿ ಸಿದ್ಧಪಡಿಸಿದ್ದ ಟೂಲ್ ಕಿಟ್ ಎಡಿಟ್ ಮಾಡಿದ್ದಾಳೆ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನು ಖಂಡಿಸಿ ಡಿವೈಎಫ್ಐ ಹಾಗೂ ಎಸ್.ಎಫ್.ಐ ಸಂಘಟನೆಗಳು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ. ಕನ್ಹಯ್ಯ ಕುಮಾರ್ನಿಂದ ಹಿಡಿದು ದಿಶಾ ರವಿವರೆಗೆ ಈ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿ ಅನೇಕ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ವಿದ್ವಾಂಸರನ್ನು ಜೈಲಿಗಟ್ಟಿದೆ. ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರಾದ ನಾವುಗಳು ಬೀದಿಗಿಳಿದು ಹೋರಾಡಿ ದೇಶದ ಸಂವಿಧಾವನ್ನು ರಕ್ಷಿಸಲಿದ್ದೇವೆ" ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, "ರಾಜ್ಯ ಗೃಹ ಇಲಾಖೆಯ ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರದೇ ಒಕ್ಕೂಟ ವ್ಯವಸ್ಥೆಯ ಎಲ್ಲಾ ಪದ್ಧತಿಗಳಿಗೆ ತಿಲಾಂಜಲಿ ನೀಡಿ ಪರಿಸರ ಹೋರಾಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇದೊಂದು ರಾಜ್ಯದ ಪೊಲೀಸ್ ಇಲಾಖೆಗೆ ಅವಮಾನವಾಗಿದ್ದು ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದ್ದ ಗೃಹ ಸಚಿವರು ಸರ್ವಾಧಿಕಾರಿ ಮೋದಿಯ ಮುಂದೆ ಮೂಗನಂತಾಗಿದ್ದಾರೆ" ಎಂದರು. "ಸರ್ಕಾರ ಕೂಡಲೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಮತ್ತು ದೇಶ ವಿರೋಧಿ ಕೃಷಿ ಕಾಯ್ದೆಯನ್ನು ವಾಪಾಸ್ಸು ಪಡೆದು ದೇಶದ ರೈತರ ಹಿತಕಾಯಲು ಮುಂದಾಗಬೇಕೆಂದು" ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಜಿಲ್ಲಾ ನಾಯಕ ನೌಷಾದ್ ಬೆಂಗ್ರೆ, ಸುನಿಲ್ ತೇವುಲ, ವರಪ್ರಸಾದ್ ಬಜಾಲ್, ಮಹಿಳಾ ಹೋರಾಟಗಾರ್ತಿ ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜಾ, ಎಸ್.ಎಫ್.ಐ ನ ವಿನೀತ್ ದೇವಾಡಿಗ, ಸಿನಾನ್ ಬೆಂಗ್ರೆ, ತಿಲಕ್ ಕುತ್ತಾರ್ , ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಮೊದಲಾದವರು ಭಾಗವಹಿಸಿದ್ದರು.