ಮಂಗಳೂರು, ಫೆ.18 (DaijiworldNews/MB) : "ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನಗಳನ್ನು ಅಳವಡಿಸಿಕೊಂಡು ಕ್ಲಪ್ತ ಸಮಯದಲ್ಲಿ ಫಲಿತಾಂಶ ಒದಗಿಸುವುದು ಶಿಕ್ಷಕನ ಸಾಮಾಜಿಕ ಬದ್ಧತೆಯಾಗಿರಬೇಕು" ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ ಎಲ್ ಧರ್ಮ ಅಭಿಪ್ರಾಯಪಟ್ಟರು.



ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಆಯೋಜಿಸಿದ್ದ ಆಂತರಿಕ ಪರೀಕ್ಷಾ ಪದ್ಧತಿಯಲ್ಲಿ ಹೊಸ ಪ್ರಯೋಗ ಎಂಬ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, "ಪರೀಕ್ಷಾ ವಿಧಾನದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಬದ್ಧತೆಯೂ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹೊಸ ಸಾಫ್ಟ್ವೇರ್ನ ಅಳವಡಿಕೆಯೊಂದಿಗೆ, ಅಧ್ಯಾಪಕರು ಮತ್ತು ಸಿಬ್ಬಂದಿಯಲ್ಲಿ ವೃತ್ತಿಪರತೆ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ" ಎಂದರು.
ನೂತನ 'ಎಂಯು ಲಿಂಕ್ಸ್' ತಂತ್ರಾಂಶದ ಕುರಿತು, ಅದನ್ನು ಅಭಿವೃದ್ಧಿಪಡಿಸಿರುವ ಮಂಗಳೂರಿನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹರೀಶ್ ಶೆಟ್ಟಿ ಮಾಹಿತಿ ನೀಡಿದರು. "ಈ ತಂತ್ರಾಂಶ ಬಳಸಲು ಸರಳ, ಜೊತೆಗೆ ಇದರಿಂದ ವಿಶ್ವವಿದ್ಯಾನಿಲಯ ಸಂಪೂರ್ಣ ಪ್ರಕ್ರಿಯೆಯನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗಿಸಲಿದೆ" ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ. ಹರೀಶ ಸ್ವಾಗತ ಕೋರಿದರೆ, ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷಾಧಿಕಾರಿ ರಮೇಶ್ ಧನ್ಯವಾದ ಸಮರ್ಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.