ಮುಡಿಪು, ಫೆ.18 (DaijiworldNews/PY): ಮುಡಿಪು ಕಾಯರ್ಗೋಳಿಯಿಂದ ಕಂಬ್ಲಪದವುವರೆಗಿನ ರಸ್ತೆ ನಿರ್ಮಾಣಗೊಂಡು 5-6 ತಿಂಗಳಷ್ಟೇ ಕಳೆದಿದೆ. ಖಾಸಗಿ ಸಂಸ್ಥೆ ಅಧೀನದ ಟ್ರಸ್ಟ್ ದೇಣಿಗೆಯಡಿ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯಲ್ಲೇ ಗ್ರಾಮಾಂತರ ಭಾಗದಲ್ಲಿ ಮಾದರಿ ರಸ್ತೆಯಾಗಿ ನಿರ್ಮಾಣ ಆಗಿದೆ. ಆದರೆ ಹರೇಕಳ-ಅಡ್ಯಾರ್ ಸೇತುವೆಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಹಂಚಿಕೆಯಾಗಲಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡಿರುವ ಕರ್ನಾಟಕ ಜಲಮಂಡಳಿ ಇನ್ನೂ ಉದ್ಘಾಟನೆಗೊಳ್ಳದ ಮಾದರಿ ರಸ್ತೆಯನ್ನೇ ಒಡೆಯಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.











ಸುಸಜ್ಜಿತ ಚರಂಡಿ, ದಾರಿದೀಪಗಳು, ಫುಟ್ಪಾತ್ ವ್ಯವಸ್ಥೆ, ರಸ್ತೆ ವಿಭಾಜಕದಲ್ಲಿ ತಂಪೆರೆಯುವ ಗಿಡಗಳು ಹೀಗೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಎಲ್ಲಿಯೂ ಕಾಣದ ರಸ್ತೆ ಮುಡಿಪು ಭಾಗದಲ್ಲಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಸಿದ್ದು, ಖಾಸಗಿ ಸಂಸ್ಥೆಯ ಕೋಟ್ಯಂತರ ದೇಣಿಗೆಯೂ ರಸ್ತೆ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಲಾಗಿದೆ. ಅಲ್ಲದೆ ರಸ್ತೆ ನಿರ್ಮಾಣದ ಸಂದರ್ಭ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸಂಸ್ಥೆಯ 5 ಮಂದಿ ಇಂಜಿನಿಯರ್ಗಳು ಸ್ಥಳದಲ್ಲೇ ಇದ್ದು, ರಸ್ತೆ ಗುಣಮಟ್ಟವನ್ನು ಪರಿಶೀಲಿಸಿಯೇ ಕಾಮಗಾರಿ ಮುಗಿಸಲಾಗಿದೆ. ಇದೀಗ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯನ್ನು ಒಡೆಯಲು ಕರ್ನಾಟಕ ಜಲಮಂಡಳಿ ಮುಂದಾಗಿದೆ.
ರಸ್ತೆ ಬದಿಯ ಸರಕಾರಿ ಭೂಮಿಯಲ್ಲೇ ಪೈಪ್ಲೈನ್ ಅಳವಡಿಸುವುದಾಗಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ ಇದೀಗ ಏಕಾಏಕಿ ಬದಲಾಯಿಸಲಾಗಿದೆ ಅನ್ನುವ ಆರೋಪ ಕೇಳಿಬಂದಿದೆ.
ಜನರ ತೆರಿಗೆ ಹಣದ ಪಾಲನ್ನೂ ಹೊಂದಿರುವ ರಸ್ತೆಯನ್ನು ಉದ್ಘಾಟನೆಗೆ ಮುನ್ನ ಒಡೆಯಲು ಸಹಾಯಕ ಆಯುಕ್ತರು ವಿಶೇಷ ಆಸಕ್ತಿಯನ್ನು ಹೊಂದಿರುವ ಕುರಿತು ವ್ಯಾಪಕ ಟೀಕೆಗಳು ಕೇಳಿಬಂದಿದೆ. ಅಲ್ಲದೆ ಅಧಿಕಾರಿಯನ್ನು ಶೀಘ್ರವೇ ಎತ್ತಂಗಡಿ ಮಾಡಬೇಕು ಅನ್ನುವ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.