ಪುತ್ತೂರು, ಫೆ.19 (DaijiworldNews/MB) : ಯಕ್ಷರಂಗದ ಸಿಡಿಲಮರಿ ಎಂದೇ ಖ್ಯಾತಿ ಪಡೆದಿರುವ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ (73) ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದರು.

ಪುತ್ತೂರು ಶ್ರೀಧರ ಭಂಡಾರಿಯವರು ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಭಿಮನ್ಯು ಪಾತ್ರ ಭಾರಿ ಜನಮೆಚ್ಚುಗೆಗೆ ಪಾತ್ರವಾಗಿತ್ತು. ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಅವರಿಗಿದೆ.
ಇನ್ನು ಧೀಂಗಿಣ ಹಾಕುವುದಲ್ಲಿ ಭಾರೀ ಪ್ರಸಿದ್ದರಾದ ಇವರು ಒಂದು ಬಾರಿಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದರು. ತನ್ನ 62 ನೆಯ ವಯಸ್ಸಿನಲ್ಲಿ ಖಾಸಗಿ ಸುದ್ದಿವಾಹಿನಿಯ 'ಶಭಾಶ್ ಇಂಡಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಿ 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದು ದಾಖಲೆ ಸೃಷ್ಟಿಸಿದ್ದರು.
ಅಮೇರಿಕಾದ ಯುನಿವರ್ಸಿಟಿ ಶ್ರೀಧರ ಭಂಡಾರಿಯವರ ಯಕ್ಷಗಾನ ಸೇವೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.