ಉಡುಪಿ, ಫೆ.19 (DaijiworldNews/MB) : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಈ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಫೆಬ್ರವರಿ 22 ರಿಂದ 27 ರವರೆಗೆ "ಜನಧ್ವನಿ" ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯು ಹೆಜಮಾಡಿ ಟೋಲ್ ಗೇಟ್ನಿಂದ ಪ್ರಾರಂಭಗೊಂಡು ಕಾಪು - ಕಟಪಾಡಿ – ಉಡುಪಿ - ಕಲ್ಯಾಣಪುರ - ಸಂತಕಟ್ಟೆ - ಬ್ರಹ್ಮಾವರ ಕುಂದಾಪುರ -ಅರೆಹೊಳೆ - ಬೈಂದೂರುನಲ್ಲಿ ಸಮಾಪನಗೊಳ್ಳಲಿರುವುದು. ಹೆಜಮಾಡಿಯಿಂದ ಬೈಂದೂರು ಶಿರೂರಿನವರೆಗಿನ 108 ಕಿ.ಮೀ. ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ. "ಜನಧ್ವನಿ" ಪಾದಯಾತ್ರೆಯು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಘನ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಸಮಾಪನಗೊಳ್ಳಲಿದೆ. ಈ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರುಗಳು ಹಾಗೂ ಜಿಲ್ಲಾ ಮುಖಂಡರುಗಳು ಭಾಗವಹಿಸಲಿರುವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾದ ಅಶೋಕ್ ಕುಮಾರ್ ಕೊಡವೂರು ತಿಳಿಸಿದರು.





ಅವರು ಇಂದು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಂದಿರುವ ರೈತ ವಿರೋಧಿ ನೀತಿಗಳಾದ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳು ಜನವಿರೋಧಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ಗಳ ಮೇಲೆ ಸರಕಾರದ ಸೆಸ್ ಹೇರಿಕೆಯಿಂದ ತೈಲಬೆಲೆ ಏರಿಕೆಗೊಂಡು ಸರಕು ಸಾಗಣೆವೆಚ್ಚ ಹೆಚ್ಚಳವಾಗಿ ದಿನ ಬಳಕೆ ವಸ್ತುಗಳ ಬೆಲೆಗಳು ಹಾಗೂ ಸಿಮೆಂಟ್ ಮತ್ತು ಸ್ಟೀಲ್ ಬೆಲೆಗಳು ನಿಯಂತ್ರಣವಿಲ್ಲದಂತೆ ಮುನ್ನುಗ್ಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದು ಹಾಕಲಾಗಿದೆ. ಇದರಲ್ಲಿ ಅಕ್ರಮ ದಾಸ್ತಾನಿನ ಮೇಲೆ ದಾಳಿ ಮಾಡಲು ಅವಕಾಶವಿಲ್ಲದಂತಾಗಿ ಕೃತಕ ಅಭಾವ ಸೃಷ್ಟಿಗೆ ಸರಕಾರವೇ ಪ್ರೇರಣೆ ನೀಡಿದಂತಾಗಿದೆ. ತೈಲ ಬೆಲೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಕನಸಾಗಿ ಉಳಿದಿದೆ" ಎಂದು ಹೇಳಿದರು.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದ ಹಲವಾರು ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಕೇಂದ್ರ ಸರಕಾರ ಮಾರಾಟ ಮಾಡುತ್ತಿದೆ. ಎಲ್.ಐ.ಸಿ, ರೈಲ್ವೆ, ವಿಮನ ನಿಲ್ದಾಣ, ಬೆಮೆಲ್, ಬ್ಯಾಂಕುಗಳು ಹಾಗೂ ನೂರಕ್ಕೂ ಹೆಚ್ಚು ಸರಕಾರಿ ಹಾಗೂ ಅರೆ ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದು ಸರಕಾರದ ವೈಫಲ್ಯದ ಪ್ರತೀಕವಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಏರ್ಪಟ್ಟಿದೆ. ಬರೇ ಬಂಡವಾಳಶಾಹಿಗಳನ್ನು ನೆಚ್ಚಿಕೊಂಡು ಆಡಳಿತ ನಡೆಸುತ್ತಿರುವ ಈ ಸರಕಾರಕ್ಕೆ ಜನರ ಬದುಕಿನ ಬಗ್ಗೆ ಬದ್ಧತೆ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ವಾಸ್ತವ ಅಲ್ಲದ ಸರಕಾರದ ಸುಳ್ಳಿನ ಹೇಳಿಕೆಗಳನ್ನು ಜನರು ನಂಬಿದ್ದರು. ಆದರೆ ಬರಬರುತ್ತಾ ಸರಕಾರದ ಜನ ವಿರೋಧಿ ನಿಲುವುಗಳು ತಮಗೆ ಮಾರಕ ಎಂದು ಜನಸಾಮಾನ್ಯನಿಗೆ ಅರಿವಾಗುತ್ತಿದೆ. 60 ವರ್ಷ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ, ದೇಶ ದ್ರೋಹಿಗಳು ಎಂದು ಹೀಗೆಳೆಯುವ ಬಿಜೆಪಿಯ ಮನಸ್ಥಿತಿ ಆ ಪಕ್ಷ ಎತ್ತ ಸಾಗುತ್ತಿದೆ ಎಂಬುದನ್ನು ಬಿಂಬಿಸುತ್ತದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಎಚ್ಚರ ಮಾಡಿಸುವುದೂ ಪಕ್ಷದ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಜನದ್ವನಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ದಿನೇಶ್ ಪುತ್ರನ್, ಶಂಕರ್ ಕುಂದರ್, ಮಂಜುನಾಥ್ ಪುಜಾರಿ, ದಿನಕರ ಹೇರೂರು, ಸದಾಶಿವ, ನವೀನ್ ಚಂದ್ರ ಸುವರ್ಣ, ವೈ ಸುಕುಮಾರ್, ಕುಶಲ್ ಶೆಟ್ಟಿ, ಗೀತಾ ವಾಗ್ಳೆ, ಶಶಿಧರ್ ಶೆಟ್ಟಿ, ರೋಶಿನಿ ಒಲಿವೆರಾ, ಹರೀಶ್ ಕಿಣಿ, ಹಬೀಬ್ ಆಲಿ ಮೊದಲಾದವರು ಉಪಸ್ಥಿತರಿದ್ದರು.