ಉಡುಪಿ, ಫೆ.22 (DaijiworldNews/HR): ಪಾದೂರಿನಲ್ಲಿ ಎರಡನೇ ಹಂತದ ಐಎಸ್ಪಿಆರ್ಎಲ್ ಕ್ರೂಡ್ ಆಯಿಲ್ ಸ್ಟೋರೇಜ್ ನ 2ನೇ ಘಟಕದ ವಿಸ್ತರಣಾ ಯೋಜನೆಗೆ ಸಂಬಂದಿಸಿದಂತೆ 210 ಎಕ್ರೆ ಭೂ ಸ್ವಾಧೀನ ಅಗತ್ಯವಿದ್ದು, ಈ ಯೋಜನೆಯ ಸಂತ್ರಸ್ಥರಿಗೆ ಕೇಂದ್ರ ಸರ್ಕಾರದ ಪರಿಷ್ಕೃತ ಭೂ ಸ್ವಾಧೀನ ನಿಯಮಗಳನ್ವಯ ಗರಿಷ್ಠ ಪರಿಹಾರ ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಈ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಸ್ತರಣಾ ಯೋಜನೆಯಿಂದ ಸಂತ್ರಸ್ಥರಾಗುವ ಸಾರ್ವಜನಿಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಐಎಸ್ಪಿಆರ್ಎಲ್ ಯೋಜನೆಯು ದೇಶದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಇದರಿಂದ 410 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಸಾಧ್ಯವಾಗಲಿದ್ದು, ಯೋಜನೆಯ 2 ನೇ ಘಟಕದ ವಿಸ್ತರಣೆಗೆ 210 ಎಕ್ರೆ ಜಾಗದ ಅಗತ್ಯವಿದ್ದು, ಯೋಜನೆಯಿಂದ ಜಾಗ ಕಳೆದುಕೊಳ್ಳುವವರಿಗೆ ಗರಿಷ್ಠ ಪರಿಹಾರ ನೀಡಿ ಅವರಿಗೆ ಸೂಕ್ತ ಪುರ್ನವಸತಿ ಸೌಲಭ್ಯ ಕಲ್ಪಿಸಬೇಕು" ಎಂದು ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
"ವಿಸ್ತರಣಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದಂತೆ ಹಾಗೂ ಸ್ಥಳದಲ್ಲಿನ 800 ವರ್ಷಗಳ ಹಿಂದಿನ ಜೈನ ಬಸದಿ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗದಂತೆ ಸರ್ವೇ ನಡೆಸಿ, ಪರಿಷ್ಕೃತ ನಕ್ಷೆ ಸಿದ್ದಪಡಿಸಿ ಎಂದು ಸೂಚಿಸಿದ ಸಂಸದರು, ಪಾದೂರು ವ್ಯಾಪ್ತಿಯಲ್ಲಿನ ಭೂ ಪ್ರದೇಶದ ಎಸ್.ಆರ್. ಬೆಲೆಯನ್ನು ಹೆಚ್ಚು ಮಾಡಿ, ಭೂಮಿ ಕಳೆದುಕೊಳ್ಳುವ ಸಂತ್ರಸ್ಥರಿಗೆ ಗರಿಷ್ಠ ದೊರೆಯುವಂತೆ ಮಾಡಿ ಹಾಗೂ ಸಂತ್ರಸ್ಥರಿಗೆ ಸೂಕ್ತ ಉದ್ಯೋಗ ನೀಡಬೇಕು" ಎಂದರು.
"2 ನೇ ಘಟಕದ ವಿಸ್ತರಣೆ ಕುರಿತಂತೆ ಪ್ರಾಥಮಿಕ ಸರ್ವೇ ನಡೆಸಲಾಗಿದೆ, 227 ಮಂದಿ ಸಂತ್ರಸ್ಥರಿಗೆ ನೋಟೀಸ್ ನೀಡಬೇಕಿದ್ದು, ಈಗಾಗಲೇ 30 ಮಂದಿಗೆ ನೋಟಿಸ್ ನೀಡಲಾಗಿದ್ದು, 3 ಜನ ನಿರಾಕರಣೆ ಮಾಡಿದ್ದಾರೆ, ಉಳಿದವರ ವಿಳಾಸ ಪತ್ತೆ ಹಚ್ಚಿ ನೋಟೀಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ, ನೋಟೀಸ್ ಪಡೆದ 30 ದಿನಗಳವೆರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ" ಎಂದು ಕೆಐಯುಡಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್, ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ,ಕಾಪು ತಾ.ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ , ಐ.ಎಸ್.ಪಿ.ಆರ್.ಎಲ್ ಅಧಿಕಾರಿ ಅಜಯ್, ರಾಜಶೇಖರ್ ಹಾಗೂ ಯೋಜನೆಯಿಂದ ಸಂತ್ರಸ್ಥರಾಗುವ ಸಾರ್ವಜನಿಕರು ಉಪಸ್ಥಿತರಿದ್ದರು.