ಮಂಗಳೂರು, ಫೆ.24 (DaijiworldNews/PY): ಬೆಂಗಳೂರಿನಲ್ಲಿ ಮಾ.7ರಂದು ನಡೆಯಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಫೆ.24ರ ಬುಧವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ತುಳು ಅಕಾಡೆಮಿಯ ಕಾರ್ಯ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದೆ, ಕೊರೊನಾ ಸಂದರ್ಭದಲ್ಲಿಯೂ ಕಲಾವಿದರಿಗೆ ಆಸರೆಯಾಗುವ ಮೂಲಕ ಮಾದರಿಯಾಗಿದ್ದೀರಿ, ಬೆಂಗಳೂರಿನ ನಗರದಲ್ಲಿ ತುಳು ಭಾಷಾ ಪ್ರಶಸ್ತಿ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ" ಎಂದ ಅವರು, ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕಾ ಹಾಗೂ ಬಂದರುಗಳ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಅವರು ಶುಭ ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು, ಅಕಾಡೆಮಿಯ ಚಟುವಟಿಕೆಯ ಹಾಗೂ ಯೋಜನೆಗಳಿಗೆ ವಿಶೇಷ ಅನುದಾನದ ಬಗ್ಗೆ ಪ್ರಸ್ತಾಪಿಸಿ, ಕಳೆದ ಮೂರು ವರ್ಷದ ಅವಧಿಯ ಪ್ರಶಸ್ತಿ ಪುರಸ್ಕೃತ ಸಮಾರಂಭವನ್ನು ರಾಜಧಾನಿಯಲ್ಲಿ ನಡೆಸುವ ಉದ್ದೇಶವನ್ನು ವಿವರವಾಗಿ ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಮಾರಂಭದ ಸದಸ್ಯ ಸಂಚಾಲಕಿ ಕಾಂತಿ ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು.