ಮಂಗಳೂರು, ಫೆ.26 (DaijiworldNews/HR): "ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ, ಅವರು ಒಂದು ತರಹ ಜೋಕರ್ ಇದ್ದಂಗೆ" ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಈ ಕುರಿತು ಮಂಗಳೂರು ನಗರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, "ಕುಮಾರಸ್ವಾಮಿ ಯಾವ ಪಾರ್ಟಿಯಾದರೂ ಅಡ್ಜೆಸ್ಟ್ ಮೆಂಟ್ ಆಗುತ್ತಾರೆ, ಅಂದ್ರೆ ಕುಮಾರಸ್ವಾಮಿಗೆ ನೈತಿಕತೆ, ಸಿದ್ದಾಂತ ಯಾವುದೂ ಇಲ್ಲ. ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಉಡಾಫೆಯಾಗಿ ವರ್ತಿಸಿದ್ದರು. ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ದಿನಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ" ಎಂದರು.
ಇನ್ನು "ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು, ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ. 2023 ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚುತ್ತದೆ ಎಂಬ ವಿಚಾರ ಅರಿತು ಮಾಜಿ ಸಿಎಂ ಕುಮಾರಸ್ವಾಮಿ ಆತಂಕದಲ್ಲಿದ್ದಾರೆ" ಎಂದು ಹೇಳಿದ್ದಾರೆ.