ಉಡುಪಿ, ಮಾ.01 (DaijiworldNews/PY): "ಐ ವಿಲ್ ಕಮ್ ಬ್ಯಾಕ್ ಅಗೈನ್. ನಾನು ಕಷ್ಟಪಟ್ಟು ದುಡಿದು ಹಣವನ್ನು ಮರುಗಳಿಸುತ್ತೇನೆ. ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸೇವೆಗಳನ್ನು ಮುಂದುವರೆಸುತ್ತೇನೆ" ಎಂದು ಉದ್ಯಮಿ ಬಿ.ಆರ್.ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ, ಭಾರತದ ಆಸ್ತಿ ಸುರಕ್ಷಿತವಾಗಿದೆ. ನನ್ನ ಆಸ್ತಿಯ ಅರ್ಧಭಾಗವನ್ನು ಮಿಲಿಂದಾ ಗೇಟ್ ಫೌಂಡೇಶನ್ಗೆ ದಾನ ಮಾಡಿದ್ದೇನೆ. ಈ ಸಂಸ್ಥೆಯು ಪಾರ್ಕಿನ್ಸನ್ ಅಮ್ನೇಶಿಯಾ ಮೊದಲಾದ ಕಾಯಿಲೆಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಟ್ಟುಕೊಳ್ಳುವ ಮಂದಿ ಇರುವ ಸಹಜವಾಗಿದೆ" ಎಂದರು.
"ಬಿ.ಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿ ಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ಆದರೆ, ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನು ಹದಗೆಟ್ಟು ಹೋಗಿಲ್ಲ. ನೀವು ಯಾರೂ ಊಹಿಸಿರದಷ್ಟು ಬಿ.ಆರ್.ಶೆಟ್ಟಿ ಆರ್ಥಿಕವಾಗಿ ಸಮಕ್ಷಮವಾಗಿದ್ದಾರೆ" ಎಂದು ತಿಳಿಸಿದರು.
"ನೀರವ್ ಮೋದಿ, ವಿಜಯ್ ಮಲ್ಯ ಆಯ್ತು, ಈಗ ಬಿ.ಆರ್.ಶೆಟ್ಟಿಯೂ ದಿವಾಳಿ ಆಗಿದ್ದಾರೆ ಎನ್ನಬಹುದು. ಆದರೆ, ನಾನು ಆ ರೀತಿಯ ವ್ಯಕ್ತಿಯಲ್ಲ. ನಾನು ಎಲ್ಲಿಗೂ ಓಡಿ ಹೋಗಿಲ್ಲ" ಎಂದರು.
"ಮೋದಿ ನನ್ನ ಆತ್ಮೀಯರು. ಆದರೆ, ಅವರಿಂದ ನಾನು ನೆರವು ಯಾಚಿಸಿಲ್ಲ. ನಾನು ಪ್ರಧಾನಿ ಅವರ ಜೊತೆ ಮಾತನಾಡಲು ಹೋದರೆ, ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನಾನು ಯಾವ ಬಿಜೆಪಿ ಮುಖಂಡರನ್ನೂ ಮಾತನಾಡಿಸಲು ಹೋಗಿಲ್ಲ" ಎಂದು ತಿಳಿಸಿದರು.
"ಅಬುದಾಬಿಯಲ್ಲಿ ಅಲ್ಲಿನ ದೊರೆ ಅರಮನೆ ಕಟ್ಟಿದಾಗ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಆಗ ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ. ಆಗ ಅವರಿಗೆ ನಿಮ್ಮ ಐದು ಟ್ರಿಲಿಯನ್ ಎಕಾನಮಿಗೆ ನನ್ನ ಐದು ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದೆ. ಆಗ ಅವರು, ಶೆಟ್ಟಿಯ ಪ್ರತಿಯೊಂದು ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದಿದ್ದರು. ಈಗ ಮಾಧ್ಯಮಗಳು ಮಾಡುತ್ತಿರುವ ವರದಿಯನ್ನು ಕಂಡರೆ ಅವರು ಏನೆಂದುಕೊಂಡಾರು?. ನಾನು ಅಳುವ ಚಿತ್ರವನ್ನು ಅವರು ನೋಡಿದರೆ ಅವರಿಗೆ ನನ್ನ ಮೇಲೆ ಭರವಸೆ ಉಳಿದೀತೆ?. ಶೆಟ್ಟಿಯ ಸಾಮ್ರಾಜ್ಯ ಉರುಳಿಬಿದ್ದಿದೆ ಎಂದು ಅವರು ಕೂಡಾ ಪತ್ರಿಕೆಗಳಲ್ಲಿ ಓದಿರುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದರು.
"ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ. ನನ್ನಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ್ದ ಓರ್ವನನ್ನು ಸಿಎಫ್ಓ ಮಾಡಿದೆ. ಆತನೇ ನನ್ನ ಬೆನ್ನಿಗೆ ಚೂರಿ ಹಾಕಿದೆ. ನನಗೆ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ. ಈ ರೀತಿಯಾದ ವ್ಯಕ್ತಿಯನ್ನು ಆರೋಪಿ ಎಂದು ನಾನು ಹೇಳಲಾರೆ. ಏಕೆಂದರೆ, ಇನ್ನೂ ಕೂಡಾ ಆರೋಪ ಸಾಬೀತಾಗಿಲ್ಲ. ಪ್ರಕರಣ ನ್ಯಾಯಾಲಯಲ್ಲಿದೆ. ಹಾಗಾಗಿ ಈ ವಿಚಾರದ ಬಗ್ಗೆ ಹೆಚ್ಚೇನು ಹೇಳುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿದ್ದಾರೆ" ಎಂದು ಆರೋಪಿಸಿದರು.
"ಜನರ ಆಶೀರ್ವಾದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ. ನಾನು ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದವನು. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒಂದು ಕ್ರೆಡಿಟ್ ಕಾರ್ಡ್ ಕೂಡಾ ಕೊಡಲು ಅಮೇರಿಕಾ ಬ್ಯಾಂಕ್ಗಳು ಹಿಂದೆ ಮುಂದೆ ನೋಡುತ್ತಿದ್ದವು. ಅಂತಹ ದಿವಾಳಿಯಾಗಿದ್ದ ಮನುಷ್ಯ ಬಳಿಕ ಅಮೇರಿಕಾದ ಅಧ್ಯಕ್ಷ ಆಗಲಿಲ್ಲವೇ?. ನಾನು ಯಾರಿಗೂ ವಂಚನೆ ಮಾಡಿಲ್ಲ ಎನ್ನುವ ಆತ್ಮವಿಶ್ವಾಸವಿದೆ ನನ್ನಲ್ಲಿ. ನನ್ನ ಮೂರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಸಂತೃಪ್ತ ಜೀವನ ನಡೆಸುತ್ತಿದ್ದಾರೆ" ಎಂದರು.
"ನಾನು ಉಡುಪಿಯಲ್ಲಿದ್ದ ಸಂದರ್ಭ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ನಾನು ಸಾಲ ಮಾಡಿ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ನಾನು ಯಾರಿಂದ ಸಾಲ ಪಡೆದುಕೊಂಡಿದ್ದೇನೋ ಎಲ್ಲವನ್ನೂ ವಾಪಾಸ್ಸು ನೀಡಿದ್ದೇನೆ. ಇದೊಂದು ನನಗೆ ಗ್ರಹಚಾರ ಬಂದಿದೆ ಏನು ಮಾಡಲು ಸಾಧ್ಯ?" ಎಂದು ಹೇಳಿದರು.
"ನನ್ನ ಆಸ್ತಿ ಕೇವಲ 36 ಸಾವಿರ ಕೋಟಿ. ರೂ ಆಗಿರಲಿಲ್ಲ. 2012ರಲ್ಲಿ ನನಗೆ 12.8 ಬಿಲಿಯನ್ ಮಾರ್ಕೆಟ್ ಕ್ಯಾಪಿಟಲ್ ಇತ್ತು. 2017ರಲ್ಲಿ ನಾನು ನ್ಯೂ ಮೆಡಿಕಲ್ ಸಂಸ್ಥೆಯಿಂದ ಹೊರಬಂದೆ. 2019ರಲ್ಲಿ ನನ್ನ ಎಲ್ಲಾ ಸಾಮ್ರಾಜ್ಯ ಕುಸಿದು ಹೋಯಿತು. ಲಕ್ಷ್ಮೀ ಚಂಚಲೆ ಹಾಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಸರಸ್ವತಿ ಮಾತ್ರ ಸ್ಥಿರವಾಗಿ ಇರುತ್ತಾಳೆ" ಎಂದು ತಿಳಿಸಿದರು.
"ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅಬುದಾಬಿಯ ದೊರೆಯೇ ಆ ಜವಬ್ದಾರಿಯನ್ನು ನನಗೆ ನೀಡಿದ್ದಾರೆ. ಅತೀ ದೊಡ್ಡದಾದ ದೇವಾಲಯವನ್ನು ಅಲ್ಲಿ ಕಟ್ಟಲಿದ್ದೇವೆ. ವಾರಣಾಸಿಯಲ್ಲಿ ಆಸ್ಪತ್ರೆ ಮಾಡಲು ಐದು ಎಕರೆಯಷ್ಟು ಜಾಗ ನೀಡಿದ್ದಾರೆ. ಅಲ್ಲಿ ಫೆಬ್ರವರಿ ತಿಂಗಳಿನಲ್ಲಿ ಶಿಲಾನ್ಯಾಸ ನಡೆಸಿದ್ದೇವೆ. ಅಯೋಧ್ಯೆಯಲ್ಲಿಯೂ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ" ಎಂದರು.
"ನಾನು ಯಾವತ್ತೋ ಆನಂದಬಾಷ್ಪ ಸುರಿಸಿದ ಚಿತ್ರವನ್ನು ಮಾಧ್ಯಮಗಳು ಕಣ್ಣೀರು ಎಂದು ಬಿಂಬಿಸಿದವು. ನನ್ನ ಮುಂದೆ 84 ಬ್ಯಾಂಕುಗಳು ನಾನು ಕೊಡಲು ಕ್ಯೂ ನಿಂತಿದ್ದವು. ಇದೀಗ ಏನೇನೋ ಮಾತನಾಡುತ್ತಿದ್ದಾರೆ. ಆದರೆ ನಾನು ಧೃತಿಗೆಡುವುದಿಲ್ಲ. ಮತ್ತೆ ಎದ್ದು ಬರುತ್ತೇನೆ" ಎಂದು ಹೇಳಿದರು.