ಬಂಟ್ವಾಳ, ಮಾ. 01(DaijiworldNews/HR): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಸೋಮವಾರ ಬಿ.ಸಿ ರೋಡಿನ ಮಿನಿ ವಿಧಾನ ಸೌದದ ಮುಂಬಾಗದಲ್ಲಿ ವಿಶಿಷ್ಠ ರೀತಿಯ ಧರಣಿ ಸತ್ಯಗ್ರಹ ನಡೆಯಿತು.







ಆರಂಭದಲ್ಲಿ ಕೈಕಂಬ ಪೊಳಲಿ ದ್ವಾರ ದಿಂದ ಬಿಸಿರೋಡು ಮಿನಿವಿಧಾನಸೌಧದವರೆಗೆ ಪಾದಯಾತ್ರೆ ನಡೆಸಲಾಗಿದ್ದು, ಪಾದಯಾತ್ರೆಯಲ್ಲಿ ಕತ್ತೆ ವಿಶೇಷ ಆಕರ್ಷಣೆ ಯಾದರೆ, ಎತ್ತಿನ ಗಾಡಿಯನ್ನು ಮಾಜಿ ಸಚಿವ ರಮಾನಾಥ ರೈ ಅವರ ಜೊತೆಯಲ್ಲಿ ಪಕ್ಷದ ಪ್ರಮುಖರು ಹೆಗಲಿಗೆ ಹೆಗಲು ಕೊಟ್ಟು ಎಳೆದುಕೊಂಡು ಬರಲಾಯಿತು.
ಕೈಕಂಬ ದ್ವಾರದಿಂದ ಆರಂಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಪುರಸಭಾ ಸದಸ್ಯ ಹಸೈನಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಸೈಕಲ್ ಸವಾರಿ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗಿಯಾದರು.
ಪಾದಯಾತ್ರೆಯ ಬಳಿಕ ಸಭಾ ಕಾರ್ಯಕ್ರಮ ನಡೆಯುತ್ತಿದ್ದಂತೆ ಪೆಂಡಲ್ನ ಅಡಿಯಲ್ಲಿ ಕಟ್ಟಿಗೆಯ ಒಲೆಯಲ್ಲಿ ಗಂಜಿ ಬೇಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, "ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪಕ್ಷದದವರ ಮುಖವಾಡ ಬಯಲು ಮಾಡಬೇಕಾಗಿದ್ದು, ಮೋದಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವುದಕ್ಕೆ ಸಾವಿರ ಸಾಕ್ಷಿಗಳಿವೆ" ಎಂದರು.
ವಕೀಲ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೊಳಿ ಮಾತನಾಡಿ, "ಶಾಸಕರ ಸಹಿತ ಬಿಜೆಪಿ ಮುಖಂಡರನ್ನು ಮಂಪರು ಪರೀಕ್ಷೆ ಮಾಡಿದರೆ ಮೋದಿಯವರ ಆಡಳಿತ ಅವ್ಯವಸ್ಥೆಯ ಮತ್ತು ಬೆಲೆ ಏರಿಕೆಯಿಂದ ಜನರ ಮೇಲೆ ಆಗಿರುವ ಪ್ರಭಾವದ ಬಗ್ಗೆ ಸತ್ಯ ಹೇಳುತ್ತಾರೆ. 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪೆಟ್ರೋಲ್ ಬೆಲೆ 70 ದಾಟಲು ಬಿಟ್ಟಿಲ್ಲ, ಡಿಸೇಲ್ ಬೆಲೆ 63 ದಾಟಲು ಬಿಟ್ಟಿಲ್ಲ, ಸಬ್ಸಿಡಿಯಲ್ಲಿ ಗ್ಯಾಸ್ 335 ರೂ ಯಲ್ಲಿ ದಾಟಲು ಬಿಟ್ಟಿಲ್ಲ ಆದರೆ ನೀವು 898 ಮಾಡಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನವಿರೋಧಿ ಬಿಜೆಪಿಗೆ, ಕಾಂಗ್ರೆಸ್ ಏನು ಮಾಡಿ ದೆ ಎಂದು ಕೇಳಲು ಯಾವ ನೈತಿಕತೆಯೂ ಇಲ್ಲ" ಎಂದು ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯರಾದ ಎಂ.ಎಸ್ ಮಹಮ್ಮದ್,ಪದ್ಮಶೇಖರ ಜೈನ್, ಪ್ರಮುಖರಾದ ಸುದರ್ಶನ ಜೈನ್, ಲುಕ್ಮಾನ್, ಪದ್ಮನಾಭ ರೈ, ಜೊಸ್ಮಿನ್ ಡಿ'ಸೋಜ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಮಂಜುಳಾಕುಶಲ ಮಂಜೊಟ್ಟಿ, ಸದಾಶಿವ ಬಂಗೇರ, ಮಹಮ್ಮದ್ ನಂದಾವರ, ಜನಾರ್ಧನ ಚೆಂಡ್ತಿಮಾರ್, ಲೋಲಾಕ್ಷ, ವಾಸುಪೂಜಾರಿ, ವೆಂಕಪ್ಪ ಪೂಜಾರಿ, ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು, ಮಾಯಿಲಪ್ಪ ಸಾಲ್ಯಾನ್ ಹಾಗೂ ಈ ಧರಣಿ ಸತ್ಯಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಹಾಗು ಪುರಸಭೆಯ ಸದಸ್ಯರು ಸೇರಿದಂತೆ ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು . ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.