ಕಾರ್ಕಳ, ಮಾ.04 (DaijiworldNews/PY): ಬಜಗೋಳಿಯ ಬಾಲಕ ಇತ್ತೀಚೆಗೆ ಕೋಣಗಳ ಜೊತೆ ಓಡಿ ಸಂಚಲನ ಮೂಡಿಸಿದ್ದು, ಇದೀಗ ಬಾಲಕಿಯೊಬ್ಬಳು ಕಂಬಳ ಕೆರೆಗೆ ಕೋಣಗಳೊಂದಿಗೆ ಇಳಿಯುವ ಮೂಲಕ ಸುದ್ದಿಯಾಗಿದ್ದಾಳೆ.

ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಮಹಿಳೆಯರೂ ಕೂಡಾ ಪಾಲ್ಗೊಳ್ಳಬಹುದು ಎಂದು ಆಕೆ ಸಾಧಿಸಿ ತೋರಿಸಿದ್ದಾಳೆ.
ಕಾರ್ಕಳ ತಾಲೂಕಿನ ಮಿಯ್ಯಾರುವಿನಲ್ಲಿ ನಡೆದ ಲವ-ಕುಶ ಕಂಬಳದಲ್ಲಿ ಪರಮೇಶ್ವರ ಭಟ್ ಅವರ ಪುತ್ರಿ ಚೈತ್ರಾ ಮೊದಲ ಬಾರಿಗೆ ಕಂಬಳ ಕೆರೆಗೆ ಇಳಿದಿದ್ದಾಳೆ.
ಚೈತ್ರಾ ಕುಂದಾಪುರದ ಬೊಳ್ಳಂಪಳ್ಳಿ ಗ್ರಾಮದ ಕಾಲ್ತೋಡು ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಬಾಲ್ಯದಲ್ಲಿ ಈಕೆಗೆ ಇದ್ದ ಆಸಕ್ತಿಯೇ ಈಕೆಯನ್ನು ಕಂಬಳ ಓಟದ ಕರೆಗೆ ಕರೆತಂದಿದೆ.
ಬೊಳ್ಳಂಪಳ್ಳಿಯ ಪರಮೇಶ್ವರ್ ಭಟ್-ರಮ್ಯಾ ದಂಪತಿಯ ಇಬ್ಬರು ಮಕ್ಕಳಲ್ಲಿ ಚೈತ್ರಾ ಹಿರಿಯವಳು. ಸಹೋದರ ಶ್ರೀರಾಮ್ ಭಟ್. ಇಬ್ಬರಿಗೂ ಕೂಡಾ ಕೋಣಗಳೆಂದರೆ ವಿಶೇಷ ಪ್ರೀತಿ. ಚೈತ್ರಾ ಎಳೆ ವಯಸ್ಸಿನಲ್ಲೇ ಕೋಣಗಳಿಗೆ ಸ್ನಾನ ಮಾಡಿಸುತ್ತಾ, ಕೋಣಗಳಿಗೆ ಬೇಕಾದ ಆಹಾರವನ್ನು ತಿನ್ನಿಸುತ್ತಾ, ಪೋಷಕರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾ ಬಂದವಳು. ಕೋಣಗಳ ಮೇಲಿನ ಪ್ರೀತಿಯೇ ಆಕೆಯನ್ನು ಕಂಬಳ ಕೆರೆಗೆ ಇಳಿಯುವಂತೆ ಮಾಡಿದೆ.
ಕಳೆದ 25 ವರ್ಷಗಳಿಂದ ಪರಮೇಶ್ವರ್ ಭಟ್ ಅವರು ಕೋಣಗಳನ್ನು ಸಾಕುತ್ತಿದ್ದಾರೆ. ಇವರ ಮನೆಯಲ್ಲಿ ಕಂಬಳದ 110 ಮೀಟರ್ ಉದ್ದದ ಕಂಬಳ ಓಟದ ಕೆರೆಯಿದ್ದು, ಚೈತ್ರಾ ಪ್ರತೀ ವಾರ ಕಂಬಳ ಕೋಣಗಳನ್ನು ಓಡಿಸುವ ಅಭ್ಯಾಸ ನಡೆಸುತ್ತಿದ್ದಾಳೆ. ತಾನು ಕೂಡಾ ಕಂಬಳ ಓಟಗಾರ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಂತೆ ಕಂಬಳ ಓಟದಲ್ಲಿ ಮಿಂಚಬೇಕು ಎನ್ನುವ ಆಸೆ ಇದೆ ಎಂದು ಚೈತ್ರಾ ಹೇಳುತ್ತಾಳೆ.