ಮಂಗಳೂರು, ಮಾ.05 (DaijiworldNews/PY): ಇತ್ತೀಚೆಗೆ ನಗರದಲ್ಲಿ ಅಪ್ಪಟ ವೀಗನ್ ಪದ್ದತಿಯಲ್ಲಿ ವಿವಾಹ ನಡೆದಿದೆ.

ಕೇರಳದ ಕೊಲ್ಲಂ ದಾಮೋದರ ಹೆಗ್ಡೆ ಹಾಗೂ ಮಂಗಳೂರಿನ ಮಧುರಾ ಶೆಣೈ ಅವರು ಫೆ.21ರಂದು ವಿವಾಹವಾಗಿದ್ದಾರೆ.
ವೀಗನ್ಸ್ ಆಗಿರುವ ಇವರಿಬ್ಬರು ತಮ್ಮ ವಿವಾಹದಲ್ಲೂ ಕೂಡ ಸಂಪೂರ್ಣವಾಗಿ ವೀಗನ್ಸ್ ಪದ್ದತಿಯನ್ನು ಅನುಸರಿಸುವ ಮುಖೇನ ಜೀವನದಲ್ಲಿ ಅಳವಡಿಸಿಕೊಂಡಿರುವ ತತ್ವವನ್ನು ವಿವಾಹ ಸಮಾರಂಭದಲ್ಲೂ ಕೂಡಾ ಸಾಕಾರಗೊಳಿಸಿದ್ದಾರೆ.
ಮಧುರಾ ಶೆಣೈ ಅವರು ಎರಡು ವರ್ಷಗಳಿಂದ ಹಾಗೂ ದಾಮೋದರ ಹೆಗ್ಡೆ ಅವರು ಆರು ತಿಂಗಳುಗಳಿಂದ ವೀಗನ್ ಜೀವನ ರೂಢಿಸಿಕೊಂಡು ಬಂದಿದ್ದು, ತಮ್ಮ ವಿವಾಹದ ಸಂದರ್ಭದಲ್ಲೂ ಕೂಡಾ ಇದೇ ತತ್ವವನ್ನು ಅನುಸರಿಸಬೇಕೆಂದು ತೀರ್ಮಾನಿಸಿದ್ದಾರೆ.
ವೀಗನ್ ಪದ್ದತಿ ಅನುಸರಿಸಲು ಆಹಾರ, ಉಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆನ್ನುವ ಅರಿವು ಇಬ್ಬರಿಗೂ ಇತ್ತು. ಇದಕ್ಕೆ ಅವರ ಮನೆಯವರೂ ಕೂಡಾ ಬೆಂಬಲ ನೀಡಿದ್ದಾರೆ.
ವೀಗನ್ ಎಂದರೆ, ಶುದ್ದ ಸಸ್ಯಾಹಾರದ ಜೀವನ. ಪ್ರಾಣಿಗಳ ಮೇಲಿನ ದೌರ್ಜನ್ಯ, ಕ್ರೌರ್ಯ ಖಂಡಿಸಲು ಪ್ರಾಣಿಜನ್ಯ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳು, ಜೇನುತುಪ್ಪ, ರೇಷ್ಮೆ, ಪ್ರಾಣಿಗಳ ಚರ್ಮ, ಕೂದಲು, ತುಪ್ಪಳ ಬಳಸಿದ ವಸ್ತುಗಳನ್ನು ವೀಗನ್ಸ್ ಉಪಯೋಗ ಮಾಡುವುದಿಲ್ಲ. ಮಂಗಳೂರಿನಲ್ಲಿ ವೀಗನಿಸಮ್ ಪದ್ದತಿಯನ್ನ ಅನುಸರಿಸುತ್ತಿರುವವರು ಹಲವರಿದ್ದಾರೆ.
ವಧು ಮಧುರಾ, ವಿವಾಹದಿಂದ ಆರತಕ್ಷತೆಯವರೆಗೂ ಬಳಸಿದ್ದು ಕಾಟನ್, ಲಿನೆನ್ ಹಾಗೂ ಬಾಳೆ ನಾಡಿನ ಸೀರೆಗಳನ್ನು ಮಾತ್ರ. ಗೌಡ ಸಾರಸತ್ವ ಸಮುದಾಯದಲ್ಲಿ ಮಂಗಳಸೂತ್ರಕ್ಕೆ ಹವಳವನ್ನು ಪೋಣಿಸುವ ಕ್ರಮ ಕಡ್ಡಾಯವಾಗಿದ್ದರೂ ಕೂಡಾ, ಈ ವಿವಾಹದಲ್ಲಿ ಹವಳ ಇಲ್ಲದೆಯೇ ಅರಶಿನ ಹಚ್ಚಿದ ದಾರವನ್ನು ವಧುವಿಗೆ ವರ ಕಟ್ಟಿದ್ದು ಒಂದು ರೀತಿಯ ವಿಶೇಷವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಆವರ್ಸೆಯ ಸಮೀಪ ಫೆ.21ರಂದು ನಡೆದ ವಿವಾಹ ಹಾಗೂ ಫೆ.22ರಂದು ಮಂಗಳೂರಿನಲ್ಲಿ ನಡೆದ ಆರತಕ್ಷತೆಯ ಊಟ-ತಿಂಡಿಗಳಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸದೆಯೇ ತಯಾರಿಸಲಾಗಿತ್ತು. ಧಾರೆ ಎರೆಯಲು ಹಾಲಿನ ಬದಲಾಗಿ ಎಳನೀರು ಉಪಯೋಗಿಸಲಾಗಿತ್ತು.
ಅತ್ಯಂತ ಸರಳ ಹಾಗೂ ಪರಿಸರ ಪೂರಕವಾಗಿ, ಯಾವುದೇ ರೀತಿಯ ದುಂದುವೆಚ್ಚವಿಲ್ಲದೇ ನಡೆದ ವಿವಾಹ ಸಮಾರಂಭವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.