ಮಂಗಳೂರು, ಮಾ.05 (DaijiworldNews/MB): ಮುಕ್ಕಾದಲ್ಲಿನ ಖಾಸಗಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಾರ್ಚ್ 5 ರ ಶುಕ್ರವಾರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದರು.

ಮಾರ್ಚ್ 5 ರ ಶುಕ್ರವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎನ್.ಶಶಿಕುಮಾರ್, ಬಂಧಿತರನ್ನು ಮುಕ್ಕಾ ನಿವಾಸಿ ಕೆ.ಯು.ಶಮೀಲ್ (22), ಬೈಕಂಪಾಡಿ ನಿವಾಸಿ ಮೊಹಮ್ಮದ್ ಬಾಝಿಲ್ (22), ಮುಲ್ಕಿ ನಿವಾಸಿ ಸಂಭ್ರಮ್ ಆಲ್ವಾ (20) ಮತ್ತು ಕಲ್ಪನೆ ನಿವಾಸಿ ಅಶ್ವಿತ್ ಎನ್ ಜಾನ್ಸನ್ ( 21) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ.
ಮಾರ್ಚ್ 3 ರಂದು ಕಾಲೇಜಿನ ಮುಖ್ಯಸ್ಥರು ನಾಲ್ಕು ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ರ್ಯಾಗಿಂಗ್ ಮಾಡಿದ್ದಾರೆ. ಆರೋಪಿಗಳು ಕಿರಿಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ನಿಂದಿಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಫೆಬ್ರವರಿ 26 ರಂದು ಈ ವಿಷಯವನ್ನು ರ್ಯಾಗಿಂಗ್ ವಿರೋಧಿ ಸಮಿತಿಯಲ್ಲಿ ಚರ್ಚಿಸಲಾಗಿದ್ದು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಅಷ್ಟೇ ಅಲ್ಲದೆ ನಂತರ ಆರೋಪಿಗಳಾದ ಶಮೀಲ್, ಬಾಝಿಲ್ ಮತ್ತು ಸಂಭ್ರಮ್ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿ ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ರ್ಯಾಗಿಂಗ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎನ್ ಶಶಿಕುಮಾರ್ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳಿಗೆ ಒತ್ತಾಯಿಸಿದರು.
ಮತ್ತೊಂದು ಪ್ರಕರಣದಲ್ಲಿ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ರ್ಯಾಗಿಂಗ್ಗೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಕಣ್ಣೂರು ನಿವಾಸಿ ಮೊಹಮ್ಮದ್ ಆದಿಲ್ (20), ಕ್ಯಾಲಿಕಟ್ ನಿವಾಸಿ ಮೊಹಮ್ಮದ್ ರಿಯಾಜ್ (20) ಮತ್ತು ಕಣ್ಣೂರು ನಿವಾಸಿ ಮೊಹಮ್ಮದ್ ನಿಜಮ್ಮುದ್ದೀನ್ (20) ಎಂದು ಗುರುತಿಸಲಾಗಿದೆ.
ಪಂಪ್ವೆಲ್ನಲ್ಲಿ ಬಾಡಿಗೆ ರೂಮಿನಲ್ಲಿ ವಾಸವಿದ್ದ ಒಂಬತ್ತು ಕಿರಿಯ ವಿದ್ಯಾರ್ಥಿಗಳನ್ನು ಮೂವರು ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಾಸ್ಟೆಲ್ನಲ್ಲಿ ತಂಗಿದ್ದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ರೂಮ್ಗೆ ಬಂದು ಪದೇ ಪದೇ ರ್ಯಾಗಿಂಗ್ ಮಾಡುತ್ತಿದ್ದರು. ತಲೆ ಬೋಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.
ಪತ್ರಿಕಾಗೋಷ್ಠಿ ಸಂದರ್ಭ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.