ಬೈಂದೂರು, ಮಾ.07 (DaijiworldNews/MB): ''ಕಳೆದ ಎರಡುವರೆ ವರ್ಷದಲ್ಲಿ ಬೈಂದೂರು ಕ್ಷೇತ್ರಕ್ಕೆ ಸುಮಾರು 1680 ಕೋಟಿ ಅನುದಾನ ಬಂದಿದ್ದು, ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಬಹು ನಿರೀಕ್ಷಿತ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಸಮರ್ಪಕ ಸೇವೆ ದೊರೆತಿದೆ. ಈಗ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಮುಂದಿನ ಒಂದೂವರೆ ವರ್ಷದೊಳಗೆ ಲೋಕಾರ್ಪಣೆಗೊಳ್ಳಲಿದೆ'' ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇವರಿಂದ ಈ ಹಿಂದೆ ಶಿಲಾನ್ಯಾಸಗೊಂಡಿರುವ ಸುಮಾರು 8.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೈಂದೂರು ನೂತನ ಮಿನಿ ವಿಧಾನಸೌಧ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

















''ಬಂದರು, ಕೊಲ್ಲೂರು, ಮರವಂತೆಯನ್ನು ಗಮನದಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಬಂದೂರನ್ನು ಮಾದರಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ. ಕೇಂದ್ರ ಸರಕಾರದ ಜಲಜೀವನ ಯೋಜನೆಯಡಿ ಹಾಗೂ ರಾಜ್ಯ ಸರಕಾರದ ಸಹಾಯದೊಂದಿಗೆ ರೂ.550 ಕೋಟಿ ವೆಚ್ಚದಲ್ಲಿ ಬಂದೂರು ಕ್ಷೇತ್ರ ಪ್ರತಿ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳ ಹಾಗೂ ಸಂಸದರ ಮತ್ತು ಸಚಿವರ ಸಹಾಯದಿಂದ ಅನುದಾನ ಸಿಕ್ಕಿದೆ. ಕೃಷಿಗೆ ನೀರಿನ ಪುರೈಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂದಾಜು ರೂ.200 ಕೋಟಿ ವೆಚ್ಚದಲ್ಲಿ ಹಲವು ಕಡೆಗಳಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಮೀನುಗಾರಿಕಾ ಇಲಾಖೆಯಿಂದ 150 ಕೋಟಿ ಅನುದಾನ ಲಭಿಸಿದ್ದು, ಈಗಾಗಲೇ ಜಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬಂದೂರು ತಾಲೂಕು ಆಸ್ಪತ್ರೆಗೆ ರೂ.25 ಕೋಟಿ ಹಾಗೂ ಸುಬ್ಬರಾಡಿ ವೆಂಟೆಂಡ್ ಡ್ಯಾಮ್ ಹೆಚ್ಚುವರಿಯಾಗಿ ರೂ.30 ಕೋಟಿ ಅನುದಾನ ದೊರೆತಿದೆ. ಆರೋಗ್ಯ ಇಲಾಖೆಯಿಂದ ಬಂದೂರು ಕ್ಷೇತ್ರಕ್ಕೆ ಎರಡು 108 ವಾಹನ ಮಂಜೂರಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ'' ಎಂದರು.
ತಹಶೀಲ್ದಾರ್ ಕಿರಣ್ ಗೌರಯ್ಯ, ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟ್ವಾಡಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯೆ ಸುಜಾತಾ ದೇವಾಡಿಗ, ಗುತ್ತಿಗೆದಾರ ಸುಜಯ್ ಉಪಸ್ಥಿತರಿದ್ದರು. ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ಕುಮಾರ್ ಶೆಟ್ಟಿ ಸ್ವಾಗತಿಸಿ, ಎ. ಅನಂದ ಖಾರ್ವಿ ವಂದಿಸಿದರು.