ಉಡುಪಿ, ಮಾ 08 (DaijiworldNews/MS): ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ, ಪೋಕ್ಸೋ ಪ್ರಕರಣದ ಆರೋಪಿ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿಗೆ ’ಮೊದಲ ಪೋಕ್ಸೋ ಪ್ರಕರಣ ’ ದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ . ಚಂದ್ರ ಹೆಮ್ಮಾಡಿ ಅಪರಾಧಿ ಎಂದು ಘೋಷಿಸಿ ಆತನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಢ ವಿಧಿಸಿ ಮಾ.8 ರ ಸೋಮವಾರ ಆದೇಶ ನೀಡಿದೆ.

ಘಟನೆ ಹಿನ್ನಲೆ ವಿವರ:
ಚಂದ್ರ ಕೆ. ಹೆಮ್ಮಾಡಿಯು ತಾನು ವರದಿಗಾರನೆಂದು ಹೇಳಿಕೊಂಡು ಬೈಂದೂರು ಭಾಗದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಬಾಲಕನೋರ್ವನಿಗೆ ತಾನು ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನ ಜೊತೆ ಬರುವಂತೆ ಪುಸಲಾಯಿಸಿ ಕರೆದೊಯ್ದು ಆತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆ ಬಳಿಕ 11 ವರ್ಷದ ಬಾಲಕನು ಮಾನಸಿಕವಾಗಿ ತೊಂದರೆಗೀಡಾಗಿದ್ದು ಆತನನ್ನು ಮಣಿಪಾಲದ ಮಾನಸಿಕ ತಜ್ಞರ ಬಳಿ ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಿದಾಗ ತನ್ನ ಮೇಲೆ ದೌರ್ಜನ್ಯ ನಡೆದಿರುವುದು ಹೇಳಿಕೊಂಡಿದ್ದ. ಈ ಬಗ್ಗೆ ಪೋಷಕರು ಬಾಲಕನನ್ನು ವಿಚಾರಿಸಿದಾಗ ಚಂದ್ರ ಹೆಮ್ಮಾಡಿ ಕುಕೃತ್ಯ ಬೆಳಕಿಗೆ ಬಂದಿದ್ದು ಬೈಂದೂರು ಠಾಣೆಗೆ ದೂರು ನೀಡಿ ಅದರಂತೆ 2018 ನವೆಂಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು.
ಇದರ ನಂತರ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದು, ಬಾಲಕರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬೈಂದೂರು, ಕೊಲ್ಲೂರು ಸಹಿತ ವಿವಿಧ ಠಾಣೆಗಳಲ್ಲಿ 21 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು . ಚಂದ್ರ ಹೆಮ್ಮಾಡಿ ವಿರುದ್ದ ಬೈಂದೂರಿನಲ್ಲಿ 16, ಕೊಲ್ಲೂರು ಠಾಣೆಯಲ್ಲಿ 1, ಗಂಗೊಳ್ಳಿ ಠಾಣೆಯಲ್ಲಿ 3 ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 1ಹೀಗೆ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಒಬ್ಬ ಆರೋಪಿ ಮೇಲೆ ಪೋಕ್ಸೋ ಪ್ರಕರಣದಲ್ಲೇ ದೇಶದಲ್ಲಿ ಅತಿ ಹೆಚ್ಚಿನ ಪ್ರಕರಣ ದಾಖಲಾಗಿರುವ ಮೊದಲ ಘಟನೆಯಾಗಿತ್ತು.
ಮೊದಲ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಶಿಕ್ಷೆ ವಿಧಿಸಲಾಗಿದೆ. ದಂಡದ 10 ಸಾವಿರದಲ್ಲಿ 5 ಸಾವಿರ ಸರಕಾರಕ್ಕೆ, 5 ಸಾವಿರ ನೊಂದ ಬಾಲಕನಿಗೆ ನೀಡಲು ಆದೇಶ ನೀಡಲಾಗಿದೆ. ಈ ಪ್ರಕರಣದಲ್ಲಿ ಅಂದಿನ ಬೈಂದೂರು ಸಿಪಿಐ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು 36 ಸಾಕ್ಷಿಗಳಲ್ಲಿ ಸಂತ್ರಸ್ತ ಬಾಲಕನ ಸಹಿತ 15 ಮಂದಿ ಸಾಕ್ಷಿ ನುಡಿದಿದ್ದರು.
ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.