ಉಳ್ಳಾಲ, ಮಾ. 11 (DaijiworldNews/SM): ವಿದ್ಯಾರ್ಥಿನಿ ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ವಶದಲ್ಲಿರುವ ಆಕೆಯ ಗೆಳೆಯ ಸೇರಿದಂತೆ ಇಬ್ಬರ ವಿಚಾರಣೆ ಗುರುವಾರವೂ ಮುಂದುವರಿದಿದೆ. ಪ್ರಕರಣದ ಹಿಂದೆ ಗಾಂಜಾ ವ್ಯಸನಿಗಳ ಕೈವಾಡದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಶ್ರಯಕಾಲನಿ ಭಾಗದ ಐದು ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರೇಕ್ಷಾ ನಿಗೂಢ ಸಾವಿನ ಕುರಿತು ಸಂಶಯವನ್ನು ವ್ಯಕ್ತಪಡಿಸಿರುವ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಅನ್ನುವ ಆಗ್ರಹವನ್ನು ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿರುವ ಮುಂಡೋಳಿಯ ಯತೀನ್ ರಾಜ್ , ಆಶ್ರಯಕಾಲನಿ ನಿವಾಸಿ ಸೌರವ್ ಮತ್ತು ಸುಹಾನ್ ವಿಚಾರಣೆ ಮುಂದುವರಿದಿದೆ.
ಈ ನಡುವೆ ಸಂದೇಶವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ `ಯತಿರಾಜ್ ಹಾಗೂ ಪ್ರೇಕ್ಷಾ ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರು ಜತೆಗಿರುವ ಹಾಗೂ ಹುಟ್ಟುಹಬ್ಬವನ್ನು ಜೊತೆಯಾಗಿ ಆಚರಿಸಿರುವ ವೀಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿಯಾಗಿವೆ. ಯುವತಿ ಪ್ರೇಕ್ಷಾ, ಯುತಿರಾಜ್ಗೆ ಕರೆಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಾಲ್ ಕಟ್ ಮಾಡಿರುತ್ತಾಳೆ. ನಂತರ ಯತಿರಾಜ್ ಎಷ್ಟು ಕಾಲ್ ಮಾಡಿದರೂ ಆಕೆ ಉತ್ತರಿಸದೆ ಇರುವುದನ್ನು ಕಂಡು ಆಕೆಯ ಮನೆಯ ಹತ್ತಿರ ಹೋಗಿ ಹತ್ತಿರದ ಮನೆಯ ಇಬ್ಬರು ಮಕ್ಕಳನ್ನು ನೋಡಲು ಕಳಿಸಿರುತ್ತಾನೆ. ಅವರು ಬಾಗಿಲು ಬಡಿದಿರುತ್ತಾರೆ. ಬಾಗಿಲು ತೆಗೆಯದ ಕಾರಣ ಮಕ್ಕಳು ಅವರ ತಾಯಿಯನ್ನು ಕರೆದುಕೊಂಡು ಬಂದು ನೋಡಲು ಹೇಳಿದ್ದಾರೆ. ಆ ಹೆಂಗಸು ಕೂಡ ಬಂದು ಬಾಗಿಲು ಬಡಿದಿದ್ದಾರೆ. ಆ ಬಳಿಕ ಪ್ರೇಕ್ಷಾಳ ತಾಯಿಯೇ ಬಂದು ನೋಡುವಾಗ ಪ್ರೇಕ್ಷಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಪ್ರೇಕ್ಷಾ ಅಂತಿಮ ಸಂಸ್ಕಾರ ಗುರುವಾರ ತೊಕ್ಕೊಟ್ಟುವಿನಲ್ಲಿ ನಡೆಯಿತು. ಮನೆಯ ಹಿಂಬಾಗಿಲ ಚಿಲಕ ಮುರಿದಿರುವುದು, ಪ್ರೇಕ್ಷಾಳಿಗೆ ಸೇರಿದ ಮೊಬೈಲ್ ರ್ಯಾಕ್ ನಲ್ಲಿ ಪತ್ತೆಯಾಗಿರುವ ಕುರಿತು ಅನುಮಾನಗಳು ಇವೆ. ಆದರೆ ಆಸ್ಪತ್ರೆ ಪ್ರಾಥಮಿಕ ಹಂತದ ವರದಿಯಲ್ಲಿ ಪ್ರೇಕ್ಷಾಳದ್ದು ಆತ್ಮಹತ್ಯೆ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಶವಮಹಜರು ವರದಿ ಬಳಿಕವಷ್ಟೇ ಗೊತ್ತಾಗಲಿದೆ.
ಯತೀನ್ ರಾಜ್ ಜತೆಗಿನ ಸ್ನೇಹ ಮತ್ತು ಪ್ರೇಕ್ಷಾ ಫೋಟೋ ಶೂಟ್ ವಿಚಾರಕ್ಕೆ ಸಂಬಂಧಿಸಿ ಮನೆಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಕುರಿತು ಪ್ರೇಕ್ಷಾಳನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ಮಾ.7 ರಂದು ಮನೆ ಸಮೀಪ ನಡೆದಿದ್ದ ಜಾತ್ರೆಯಲ್ಲಿ ಯತೀನ್ ರಾಜ್ ಮತ್ತು ಪ್ರೇಕ್ಷಾ ಜತೆಗೆ ಇದ್ದರು. ಅಲ್ಲದೆ ಪ್ರೇಕ್ಷಾ ಬೆಂಗಳೂರಿಗೆ ತೆರಳುವ ವಿಚಾರವಾಗಿ ಜಾತ್ರೆಯಲ್ಲಿ ಇಬ್ಬರಿಗೂ ಜಗಳವಾಗಿತ್ತು ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಗಾಂಜಾ ವ್ಯಸನಿಗಳು ವಶಕ್ಕೆ :
ಪ್ರಕರಣದ ಹಿಂದೆ ಗಾಂಜಾ ಕೈವಾಡ ಇರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಕುಂಪಲ ಆಸುಪಾಸಿನಲ್ಲಿ ಗಾಂಜಾ ವ್ಯಸನಿಗಳ ಮೇಲೆ ಕಣ್ಗಾವಲು ಇರಿಸಿದ್ದಾರೆ. ಅಲ್ಲದೆ ಕುಂಪಲ ಆಶ್ರಯಕಾಲನಿ ಸಮೀಪ ಖಾಲಿ ಮನೆಯೊಂದನ್ನು ಗಾಂಜಾ ವ್ಯಸನಕ್ಕೆ ಅಡ್ಡೆಯಾಗಿರಿಸಿರುವ ಜಾಗದ ಮೇಲೂ ನಿಗಾ ಇರಿಸಿದ್ದಾರೆ. ಸ್ಥಳೀಯವಾಗಿ ಗಾಂಜಾ ಸೇವನೆ ನಡೆಸುತ್ತಿದ್ದ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಮೊಬೈಲಲ್ಲಿ ಗುಡ್ ಬೈ ಸಂದೇಶ :
ಗೆಳೆಯ ಯತೀನ್ ರಾಜ್ ಗೆ ಕೊನೆ ಘಳಿಗೆಯಲ್ಲಿ ಗುಡ್ ಬೈ ಸಂದೇಶ ಹಾಕಿರುವುದು ಮೊಬೈಲ್ ಪರಿಶೀಲಿಸಿದಾಗ ಪತ್ತೆಯಾಗಿದೆ. ಅಲ್ಲದೆ 5 ನಿಮಿಷಗಳ ವೀಡಿಯೋ ಕಾಲ್ ಮಾಡಿರುವುದಾಗಿಯೂ ತಿಳಿದುಬಂದಿದೆ.