ಉಡುಪಿ, ಮಾ. 12 (DaijiworldNews/SM): ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಅಂಗಡಿಯ ಮಾಲಕ ಮತ್ತು ಸಿಬ್ಬಂದಿ ನಡುರಸ್ತೆಯಲ್ಲೇ ಪೌರಕಾರ್ಮಿಕರೊರ್ವರಿಗೆ ಹಲ್ಲೆ ಮಾಡಿದ ಘಟನೆ ಮಾರ್ಚ್ ೧೨ರ ಶುಕ್ರವಾರದ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಸಗಳನ್ನು ವಿಂಗಡಿಸಿ ಕೊಡಬೇಕು ಎನ್ನುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪೌರ ಕಾರ್ಮಿಕ ವಾಹನ ಚಾಲಕನಾದ ಸಂಜೀವ್ ಮಾದರ್ ಮೇಲೆ ಎಲೆಕ್ಟ್ರಾನಿಕ್ ಅಂಗಡಿ ಮಾಲಕ ಮತ್ತು ಸಿಬಂದಿಗಳು ಸೇರಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬೆದರಿಸಿದ್ದಾರೆ. ಈ ಕುರಿತಾದ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಗರಸಭೆಯ ಆರೋಗ್ಯಾಧಿಕಾರಿ ಕರುಣಾಕರ್ ಸ್ಥಳಕ್ಕೆ ಆಗಮಿಸಿದ್ದರೂ, ಅಂಗಡಿಯ ಮಾಲಕರು ಕ್ಯಾರೆ ಮಾಡದೆ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಅಧಿಕಾರಿಯ ಎದುರೇ ಮತ್ತೆ ಚಾಲಕ ಸಂಜೀವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಉಡುಪಿ ನಗರಸಭೆಯಲ್ಲಿ ಹಸಿ, ಒಣ ಮತ್ತು ಪ್ಲಾಸ್ಟಿಕ್ ಕಸವನ್ನು ವಿಂಗಡಿಸಿಕೊಡಬೇಕು. ಆದರೆ ಎಲೆಕ್ಟ್ರಾನಿಕ್ ಅಂಗಡಿಯವರು ಎಲ್ಲವನ್ನು ಒಂದೇ ಚೀಲಕ್ಕೆ ಹಾಕಿ ಕೊಟ್ಟಿದ್ದನ್ನು ಚಾಲಕ ಪ್ರಶ್ನಿಸಿದ್ದಕ್ಕೆ, ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕೂತಿದ್ದ ಆತನನ್ನು ಕಾಲರ್ ಪಟ್ಟಿ ಹಿಡಿದು ಹೊರಗೆಳೆದು ಕೆನ್ನೆಗೆ ಹೊಡೆದಿದ್ದ.