ವಿಟ್ಲ, ಮಾ.15 (DaijiworldNews/MB) : ವಿಟ್ಲ ನಗರ ಹೊರವಲಯದ ಚಂದಳಿಕೆ ಎಂಬಲ್ಲಿನ ಗ್ಯಾರೇಜ್ವೊಂದರಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಗ್ಯಾರೇಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅವಘಡದಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಗ್ಯಾರೇಜ್ ಚಂದಳಿಕೆ ಹರೀಶ್ ಎಂಬವರಿಗೆ ಸೇರಿದ್ದು ಎಂದು ವರದಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಗ್ಯಾರೇಜ್ ಭಾಗಶಃ ಸುಟ್ಟು ಹೋಗಿದೆ.
ಗ್ಯಾರೇಜ್ ಒಳಗಡೆ 10ಕ್ಕಿಂತಲೂ ಅಧಿಕ ವಾಹನಗಳಿದ್ದವು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಅವುಗಳನ್ನು ಸ್ಥಳೀಯರು ತೆರವುಗೊಳಿಸಿ ಅನಾಹುತ ತಪ್ಪಿಸಿದ್ದಾರೆ. ಆದರೆ ರಿಪೇರಿಗೆಂದು ಇರಿಸಲಾಗಿದ್ದ ಕೆಲವು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬೆಂಕಿ ಸುತ್ತಲಿನ ಮನೆ, ಅಂಗಡಿಗಳಿಗೆ ಪಸರಿಸುವುದನ್ನು ತಡೆಗಟ್ಟಲು ಸಾರ್ವಜನಿಕರು ಪಿಕಪ್ ವಾಹನದ ಮೂಲಕ ನೀರು ಹಾಕಿದ್ದು ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.