ಕಾರ್ಕಳ, ಮಾ.17 (DaijiworldNews/MB) : ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗದಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಹಿಂದೂ ಜಾಗರಣ ವೇದಿಕೆ (ಹಿಂಜಾವೇ) ಸದಸ್ಯ ನಿಟ್ಟೆ ಗ್ರಾಮದ ಅನಿಲ್ ಪೂಜಾರಿ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 16 ರ ಮಂಗಳವಾರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಭಜರಂಗದಳ ಕಾರ್ಯಕರ್ತರಾದ ಸುನಿಲ್, ಪ್ರಸಾದ್ ಹಾಗೂ ಶರತ್ ಎಂದು ಗುರುತಿಸಲಾಗಿದ್ದು ಮೂವರು ನಿಟ್ಟೆಯವರಾಗಿದ್ದಾರೆ.

ಮಾರ್ಚ್ 14 ರ ರಾತ್ರಿ ನಿಟ್ಟೆಯಲ್ಲಿರುವ ಅನಿಲ್ ಪೂಜಾರಿ ಅವರ ಮನೆಗೆ ನುಗ್ಗಿದ ಗ್ಯಾಂಗ್ ಬಲವಂತವಾಗಿ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿತ್ತು. ಪ್ರಕರಣವನ್ನು ನೋಂದಾಯಿಸಿದ ಪೊಲೀಸರು, ಬಂಧನ ಕಾರ್ಯಾಚರಣೆ ಆರಂಭಿಸಿದ್ದು ಈ ಮೂವರು ಆರೋಪಿಗಳು ಬೆಳುವಾಯಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುನೀಲ್, ಶರತ್ ಮತ್ತು ಪ್ರಸಾದ್ ಅವರು ಭಜರಂಗದಳದ ಸದಸ್ಯರು ಎಂದು ವರದಿಯಾಗಿದೆ. ಈ ಮಧ್ಯೆ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರ ಹುಡುಕಾಟ ನಡೆಸುತ್ತಿದ್ದಾರೆ.
ಅಪರಾಧಿಗಳನ್ನು ಬಂಧಿಸುವ ಕಾರ್ಯಾಚರಣೆಯನ್ನು ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತೇಜಸ್ವಿ ಮತ್ತು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಮಧು ಬಿ ಇ ಅವರು ಉಪ ಪೊಲೀಸ್ ವರಿಷ್ಠಾಧಿಕಾರಿ ಭರತ್ ರೆಡ್ಡಿ ಮತ್ತು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಿರ್ವಹಿಸಿದರು.