ಕುಂದಾಪುರ, ಮಾ.17 (DaijiworldNews/PY): ತಾಲೂಕಿನ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಚಿಸಿದ ವಿಡಿಯೋವೊಂದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರ ಮಹಾತ್ವಕಾಂಕ್ಷೆಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಪ್ರೇರಣೆ ನೀಡುವ ಪ್ರಮೋಶನಲ್ ವಿಡಿಯೋಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ.
ಈ ವಿಡಿಯೋ ಈಗಾಗಲೇ ಡಿಡಿ ಇಂಡಿಯಾ ಸೇರಿದಂತೆ ಡಿಡಿ ನ್ಯೂಸ್, ಡಿಡಿ ಚಂದನ ಟಿ.ವಿ, ಡಿಡಿ ನ್ಯೂಸ್ ಟ್ವಿಟ್ಟರ್ನಲ್ಲಿ ಪ್ರಸಾರ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ದೇಶಾದ್ಯಂತ ಪಸರಿಸುವಂತಾಗಿದೆ. ಈ ವಿಡಿಯೋದ ಹಿಂದಿ ಅವತರಣಿಕೆಯು ರಾಷ್ಟ್ರಮಟ್ಟದ ಹಿಂದಿ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ.
2.52 ನಿಮಿಷಗಳಿರುವ ಈ ವಿಡಿಯೋವನ್ನು ಮುಖ್ಯ ಶಿಕ್ಷಕ ಶೆಟ್ಟಿಗಾರ್ ಅವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸೈಬರಕಟ್ಟೆ ಅವರ ನಿರ್ದೇಶನದಲ್ಲಿ ಹಾಗೂ ಎಲ್ಲಾ ಶಿಕ್ಷಕರ ಸಹಯೋಗದೊಂದಿಗೆ ಗೂಗಲ್ ಅರ್ಥ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಲಾಗಿದೆ. ವಿದ್ಯಾರ್ಥಿಗಳ ಊರು ಸೇರಿದಂತೆ ಶಾಲೆಯ ಪರಿಸರವನ್ನು ತೋರಿಸಲು ಗೂಗಲ್ ಅರ್ಥ್ ಅನ್ನು ಸರಿಯಾಗಿ ಬಳಸಲಾಗಿದೆ.
ಐದು ವಿದ್ಯಾರ್ಥಿನಿಯರು ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ವಿಡಿಯೋ ಮೂಲಕ ಅರ್ಜಿ ಸಲ್ಲಿಸಲು ವೀಕ್ಷಕರಿಗೆ ಸ್ಪೂರ್ತಿಯ ಸಂದೇಶ ನೀಡಿದ್ದಾರೆ.
ನವದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ನಿರ್ದೇಶಕರು ಗ್ರಾಮೀಣ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪೋಷಕರು, ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಂಸ್ಥೆಯವರು, ಹಳೆ ವಿದ್ಯಾರ್ಥಿಗಳು ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ತಜ್ಞರೂ ಕೂಡಾ ಈ ವಿಡಿಯೋವನ್ನು ಶ್ಲಾಘಿಸಿದ್ದಾರೆ.