ಮಂಗಳೂರು, ಮಾ.19 (DaijiworldNews/PY): "ರಾಸಾಯನಿಕ ದುರಂತದ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರು ತಮ್ಮ ರಕ್ಷಣೆಯ ಕಾರ್ಯದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ" ಎಂದು ಸಹಾಯಕ ಆಯುಕ್ತ ಮದನ್ ಮೋಹನ್ ಸಿ. ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ರಾಸಾಯನಿಕ ದುರಂತದ ಅಣುಕು ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
"ಎನ್ಡಿಆರ್ಎಫ್ ಸಿಬ್ಬಂದಿಗಳಿಂದ ಜಿಲ್ಲೆಯ ಬಾಳಾ ಗ್ರಾಮದ ಬಿಎಎಸ್ಎಫ್ ರಾಸಾಯನಿಕ ಕಾರ್ಖಾನೆಯ ವ್ಯಾಪ್ತಿಯ ಸಾರ್ವಜನಿಕರಿಗೆ ರಾಸಾಯನಿಕ ದುರಂತದಿಂದ ಆಗುವ ಅಪಾಯವನ್ನು ತಡೆಗಟ್ಟುವ ಬಗ್ಗೆ ಅಣುಕು ಪ್ರದರ್ಶನವು ಮಾರ್ಚ್ 20 ರಂದು ನಡೆಯಲಿದೆ. ರಾಸಾಯನಿಕ ಸೋರುವಿಕೆಯಿಂದಾಗುವ ಅನಾಹುತಗಳನ್ನು ಪರಿಣಿತರು ಮಾತ್ರವಲ್ಲದೆ ಜನಸಾಮಾನ್ಯರು ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬ ಸಾಂದರ್ಭಿಕ ಅಣುಕು ಪ್ರದರ್ಶವು ಎಲ್ಲರಿಗೂ ಉಪಯೋಗವಾಗಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು" ಎಂದರು.
"ಇಂತಹ ಅನಾಹುತಗಳು ಸಂಭವಿಸಿದಾಗ ಮೊದಲು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವರಕ್ಷಣೆ ಹಾಗೂ ಇತರರನ್ನು ರಕ್ಷಿಸುವ ಪರಿಯನ್ನು ಮನನ ಮಾಡಲು ಇದು ಸಹಕಾರಿಯಾಗಲಿದೆ" ಎಂದರು.
"ಗ್ರಾಮ ಪಂಚಾಯತ್ ಪಿಡಿಒಗಳು ರಾಸಾಯನಿಕ ಅಣುಕು ಪ್ರದರ್ಶನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಅಪಾಯದ ತೀವ್ರತೆಯನ್ನು ಮನದಟ್ಟುಮಾಡಿಕೊಳ್ಳುವಂತೆ ಮಾಡಬೇಕು" ಎಂದರು
"ಅಣುಕು ಪ್ರದರ್ಶನದಲ್ಲಿ ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳು ಇದರಲ್ಲಿ ಭಾಗಿಯಾಗಿ ಇದರ ಯಶಸ್ವಿಗೆ ಸಹಕರಿಸಬೇಕು" ಎಂದರು.
ಸಭೆಯಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ನ ಉಪನಿರ್ದೇಶಕರು ರಾಜೇಶ್ ಮಿಶ್ರಿ ಕೋಟಿ, ಬೆಂಗಳೂರು ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ವಿಜಯ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.