ಮಂಗಳೂರು, ಮಾ.20 (DaijiworldNews/MB) : ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯೆಡೆಗೆ" ಎಂಬ ಕಾರ್ಯಕ್ರಮದಿಂದ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ತಿಳಿಸಿದರು.




ಅವರು ಇಂದು ಕಂದಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ವಿಟ್ಲದ ಪಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿಗೆ ಆಯಾಯ ಭಾಗದ ಜನಪ್ರತಿನಿಧಿಗಳು ಆಲಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದ ಅವರು, ಜನರು ತಮ್ಮ ಕಷ್ಟಗಳನ್ನು ನೇರವಾಗಿ ತಿಳಿಸಿ ಹಾಗೂ ಸರ್ಕಾರದ ಹಲವಾರು ಸೌಲಭ್ಯಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಕಲಚೇತನರ ವೇತನ, ಎಂಡೋಸಲ್ಫಾನ್ ಪೀಡಿತರ ವೇತನ, ಅಕ್ರಮ ಸಕ್ರಮ ಯೋಜನೆಗಳು, ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದರು.
ಜನರ ಸಮಸ್ಯೆಗಳನ್ನು ಕೇಳಿ ಅವರ ಸಮಸ್ಯೆ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 2 ವಾರಗಳಲ್ಲಿ ಜನರ ಸಮಸ್ಯೆಗಳು ಹಾಗೂ ಪರಿಹಾರಗಳ ವರದಿಯನ್ನು ಬಂಟ್ವಾಳ ತಾಲೂಕಿನ ತಹಶೀಲ್ದಾರ್ ಸಿದ್ಧಪಡಿಸಬೇಕು ಎಂದರು. ಕೋವಿಡ್ 2 ನೇ ಅಲೆ ಜಾಸ್ತಿಯಾಗುತ್ತಿದ್ದು, 45 ವರ್ಷಕ್ಕೂ ಮೇಲ್ಪಟ್ಟವರು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಜಿಲ್ಲೆಯನ್ನು ಕರೋನ ಮುಕ್ತವಾಗಿಸಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ, ವಿಟ್ಲದ ಪಡ್ನೂರು ಗ್ರಾಮವು ಸರಿಯಾದ ಸೌಕರ್ಯಗಳನ್ನು ಒಳಗೊಂಡಿಲ್ಲ. ಆದ್ದರಿಂದ ಈ ಗ್ರಾಮವನ್ನು ಅಭಿವೃದ್ಧಿಯೆಡೆಗೆ ಸಾಗಿಸುವ ಕೆಲಸವಾಗಬೇಕಿದೆ ಎಂದರು. ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒಡಗಿಸುವುದರೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯೆಡೆಗೆ ಕಾರ್ಯಕ್ರಮವು ಬಹಳ ಪ್ರಯೋಜನಕಾ ರಿಯಾಗಿದೆ ಎಂದರು.
ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್ ಆರ್. ಮಾತನಾಡಿ, ಪಡ್ನೂರು ಗ್ರಾಮದಲ್ಲಿ ಒಟ್ಟು 1397 ಮನೆಗಳಿದ್ದು, 6589 ಜನಸಂಖ್ಯೆ ಇದ್ದಾರೆ. 94(ಸಿ) ಯಲ್ಲಿ ಒಟ್ಟು 393 ಅರ್ಜಿಗಳು ಸ್ವೀಕೃತಿಯಾಗಿದ್ದು, 222 ಅರ್ಜಿಗಳು ಮಂಜೂರಾಗಿ, 162 ತಿರಸ್ಕೃತಗೊಂಡು 9 ಅರ್ಜಿಗಳು ಬಾಕಿಯಾಗಿವೆ. 94 (ಸಿಸಿ) ಯಲ್ಲಿ 43 ಅರ್ಜಿಗಳು ಸ್ವೀಕೃತವಾಗಿ, 34 ಅರ್ಜಿಗಳು ಮಂಜೂರಾಗಿ, 9 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.
ಗ್ರಾಮದಲ್ಲಿ ಒಟ್ಟು 14 ಜನರು ವೃದ್ಧಾಪ್ಯ ವೇತನ ಪಡೆಯುತ್ತಿದ್ದು, ಸಂಧ್ಯಾ ಸುರಕ್ಷಾದಲ್ಲಿ 221, 77 ಜನರಿಗೆ ಅಂಗವಿಕಲರ ವೇತನ, 169 ಜನರಿಗೆ ವಿಧವಾ ವೇತನ, 20 ಜನರಿಗೆ ಮನಸ್ವಿನಿ ವೇತನ, 2 ಜನರಿಗೆ ಎಂಡೋಸಲ್ಫಾನ್ ಪೀಡಿತ ವೇತನ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೇ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ತಾಲೂಕು ಪಂಚಾಯತ್ ಸದಸ್ಯೆ ಶೋಭಾ ರೈ, ಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.