ಪುತ್ತೂರು, ಎ.03 (DaijiworldNews/PY): ಕೋಳಿ ಸಾಗಾಟದ ಲಾರಿ ಹಾಗೂ ವ್ಯಾಗನರ್ ಕಾರು ಢಿಕ್ಕಿಯಾದ ಪರಿಣಾಮ ನವ ವಿವಾಹಿತರೊಬ್ಬರು ಸಾವನ್ನಪ್ಪಿ, ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ಏ.3 ರ ಶನಿವಾರ ಬೆಂಗಳೂರಿನ ನೆಲಮಂಗಲದಲ್ಲಿ ನಡೆಸಿದೆ.

ಮೃತರನ್ನು ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ (23) ಎಂದು ಗುರುತಿಸಲಾಗಿದೆ.
ದಾರಂದಕುಕ್ಕು ನಿವಾಸಿ ಸವಿತಾ ಉದಯ ಕುಮಾರ್ ಅವರ ಪುತ್ರ ಗೋಪಿಕ್ ಹಾಗೂ ಬೆಳ್ತಂಗಡಿ ಗೇರುಕಟ್ಟೆ ಕುಂಟಿನಿ ನಿವಾಸಿ ರೂಪಾ ಹಾಗೂ ಪದ್ಮನಾಭ ಶೆಟ್ಟಿ ಅವರ ಪುತ್ರಿ ಧನುಷಾ ಅವರ ವಿವಾಹ ಫೆ.21ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದಿತ್ತು. ವಿವಾಹದ ನಂತರ ದಾರಂದಕುಕ್ಕು ಮನೆಯಲ್ಲಿದ್ದ ನವದಂಪತಿ ತನ್ನ ದೊಡ್ಡಮ್ಮ ಹಾಗೂ ರೂಪಾ ವೇಣುಗೋಪಾಲ್ ಅವರೊಂದಿಗೆ ಎ.3ರಂದು ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮುಂಜಾನೆ ಮಾರುತಿ ವ್ಯಾಗನರ್ ಕಾರಿನಲ್ಲಿ ಹೊರಟಿದ್ದರು.
ಕಾರು ಬೆಂಗಳೂರು ನೆಲಮಂಗಲಕ್ಕೆ ತಲುಪುತ್ತಿದ್ದಂತೆ ಕೋಳಿ ಸಾಗಾಟದ ಲಾರಿ ಕಾರಿಗೆ ಢಿಕ್ಕಿಯಾಗಿದೆ. ಢಿಕ್ಕಿಯಾದ ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಧನುಷಾ ಸಾವನ್ನಪ್ಪಿದ್ದಾರೆ. ಗೋಪಿಕ್ ಹಾಗೂ ಸಂಬಂಧಿಕರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದುಬಂದಿದೆ.