ಮಂಗಳೂರು, ಎ.04 (DaijiworldNews/PY): ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ.ಸಾಲ್ಯಾನ್ ಎ.2ರ ಶನಿವಾರದಂದು ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.







ಜಿಲ್ಲಾ ಮಟ್ಟದ ಮುಖಂಡರ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಿ ಮುಂದಿನ ದಿನಗಳಲ್ಲಿ ನಗರದಲ್ಲಿ 'ಕೈ'ಗೆ ಬಲ ತುಂಬುವ ಪಣ ತೊಟ್ಟರು.
"ಕಾರ್ಪೊರೇಟರ್ ಆಗಿದ್ದಾಗ ಉತ್ತಮ ಕೆಲಸ ಮಾಡಿದ್ದರಿಂದ ಕಳೆದ ಮನಪಾ ಚುನಾವಣೆಯಲ್ಲಿ ಒಂದು ಮತದ ಅಂತರದಿಂದಾದರೂ ಜಯ ಗಳಿಸುತ್ತಾರೆಂದು ಭಾವಿಸಲಾಗಿತ್ತು, ಆದರೆ ಅದೃಷ್ಟ ಕೈಕೊಟ್ಟು ಸೋತರೂ ಇದೀಗ ಅಧ್ಯಕ್ಷರಾಗಿ ಪ್ರಮೋಶನ್ ಪಡೆದಿದ್ದಾರೆ. ಮುಂದೆ ಶಾಸಕ ಯಾರು ಬೇಕಾದರೂ ಆಗಬಹುದು, ಆದರೆ ಟಿಕೆಟ್ ರೇಸ್ನಲ್ಲಿ ಸಾಲ್ಯಾನ್ ಅವರ ಹೆಸರು ಇರಬೇಕು" ಎಂದು ಮುಖಂಡ ಸುರೇಶ್ ಬಳ್ಳಾಲ್ ಹೇಳಿದರು.
ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, "ಒಂದು ಜವಾಬ್ದಾರಿ ಹೂವಿನ ಹಾಸಿಗೆಯಲ್ಲ, ಇನ್ನಷ್ಟು ಜವಾಬ್ದಾರಿ ವಹಿಸಿಕೊಳ್ಳುವ ಒಂದು ವ್ಯವಸ್ಥೆ. ನಗರ ಬ್ಲಾಕ್ನಲ್ಲಿ ದಕ್ಷಿಣಕ್ಕಿಂತ ಹೆಚ್ಚು ಸಮಸ್ಯೆಗಳಿವೆ. ಪ್ರಕಾಶ್ ಸಾಲ್ಯಾನ್ ಅವರಿಂದ ಪಕ್ಷಕ್ಕೆ ಲಾಭವಾಗಲಿದೆ. ಆದರೆ ಅವರ ಬಗ್ಗೆ ಟೀಕಿಸುತ್ತಾ ಕೂರದೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲು ಅವಶ್ಯಕತೆಯಿದೆ" ಎಂದು ತಿಳಿಸಿದರು.
ಮನಪಾ ವಿಪಕ್ಷ ನಾಯಕ ಎ.ಸಿ.ವಿನಯ್ ರಾಜ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಕೃಪಾ ಆಳ್ವ ಇನ್ನಿತರರು ಉಪಸ್ಥಿತರಿದ್ದರು.