ಮಂಗಳೂರು, ಎ.08 (DaijiworldNews/MB) : ಪಾರಿವಾಳವೊಂದು ನೀರಿಗೆ ಬಿದ್ದು ಅಪಾಯದಲ್ಲಿದ್ದ ಸಂದರ್ಭ ತಮಗೆ ಕರೆ ಬಂದಾಗ ಆ ಪಾರಿವಾಳದ ರಕ್ಷಣೆಗೆ ಅಗ್ನಿಶಾಮಕ ದಳವು ಆಗಮಿಸಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/mb-080421-pigeon.jpg)
ಇಲ್ಲಿ ಎಂಜಿ ರೋಡ್ನಲ್ಲಿರುವ ಡಾ ಟಿ ಎಂ ಎ ಪೈ ಕನ್ವೆನ್ಷನ್ ಹಾಲ್ ಎದುರು ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ಖಾಸಗಿ ಭೂಮಿಯಲ್ಲಿ ನಿರ್ಮಾಣ ಕಾರ್ಯಕ್ಕಾಗಿ ನೀರಿನ ಬಾವಿಯನ್ನು ರಚಿಸಲಾಗಿದೆ. ಇದರಿಂದ ನೀರು ಕುಡಿಯಲು ಪ್ರಯತ್ನಿಸಿದ ಪಾರಿವಾಳವು ತಪ್ಪಿ ನೀರಿಗೆ ಬಿದ್ದಿದೆ. ನೀರಿನಿಂದ ಮೇಲೆ ಬರಲು ಅದು ಪ್ರಯತ್ನ ಮಾಡಿದ್ದು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಗಮಿಸಿದ್ದಾರೆ.
ಆಳವಾದ ನೀರಿನ ಬಾವಿಯಲ್ಲಿ ಬಿದ್ದಿರುವ ಪಾರಿವಾಳವನ್ನು ರಕ್ಷಿಸುವುದು ಕಷ್ಟವೆಂದು ಅರಿಯ ಅವರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಪಾರಿವಾಳ ಬಿದ್ದಿರುವ ಸುದ್ದಿ ತಿಳಿದು ಪಾಂಡೇಶ್ವರದಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ರಕ್ಷಣಾ ವಾಹನದೊಂದಿಗೆ ಸ್ಥಳಕ್ಕೆ ತಲುಪಿ ಪಾರಿವಾಳವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಪಕ್ಷಿ ಪ್ರೇಮಿ ತೌಸಿಫ್ ಅವರನ್ನು ಸ್ಥಳಕ್ಕೆ ಕರೆಸಲಾಗಿದ್ದು ಅವರು ನೀರಿನಲ್ಲಿ ತೊಯ್ದಿದ್ದ ಪಾರಿವಾಳದ ದೇಹದಲ್ಲಿದ್ದ ನೀರನ್ನು ಬಟ್ಟೆಯಿಂದ ಒರೆಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ಒಣಗಿಸಲು ಸ್ಕೂಟರ್ನ ಸೈಲೆನ್ಸರ್ನಿಂದ ಹಕ್ಕಿಯ ಮೇಲೆ ಗಾಳಿಯನ್ನು ಹಾಯಿಸಿದರು.
ಅದನ್ನು ಒಂದು ದಿನ ನಿಗಾದಲ್ಲಿರಿಸಿ ಬಳಿಕ ಹಾರಲು ಬಿಡಲಾಗಿದೆ ಕರೆಗೆ ತಕ್ಷಣ ಸ್ಪಂದಿಸಿದ ಮತ್ತು ಪಾರಿವಾಳದ ಜೀವ ಉಳಿಸಿದ ಅಗ್ನಿಶಾಮಕ ದಳಕ್ಕೆ ನಾಗರಿಕರ ಪರವಾಗಿ ಧನ್ಯವಾದ ಎಂದು ಶಶಿಧರ್ ಶೆಟ್ಟಿ ಹೇಳಿದರು.