ಮಂಗಳೂರು, ಏ.23 (DaijiworldNews/HR): ಇತ್ತೀಚಿನ ಹೆದ್ದಾರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು 'ಮಂಕಿ ಸ್ಟ್ಯಾಂಡ್' ವಿಜಯಾ ಮತ್ತು ಪ್ರದೀಪ್ ಮೆಂಡನ್ ಅವರ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಶೀಟರ್ ಆಕಾಶ್ಭವನ ಶರಣ್ನನ್ನು ಮಂಗಳೂರು ಪೊಲೀಸರು ವಿಚಾರಣೆಗಾಗಿ ಒಂದು ವಾರಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/hr-230421-sharan.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/hr-230421-sharan1.jpg)
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮತ್ತು ಮಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದ ಶರಣ್, ಪ್ರದೀಪ್ ಮೆಂಡನ್ ಮತ್ತು 'ಮಂಕಿ ಸ್ಟ್ಯಾಂಡ್' ವಿಜಯ್ ಅವರನ್ನು ಹತ್ಯೆ ಮಾಡಲು ಮತ್ತು ದರೋಡೆ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಒಟ್ಟು ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಹೆದ್ದಾರಿ ದರೋಡೆ ಹಾಗೂ ಹತ್ಯೆಗೆ ಸಂಚು ಮಾಸ್ಟರ್ ಮೈಂಡ್ ಆಗಿದ್ದ ಶರಣ್ ನಿರ್ದೇಶನದ ಮೇರೆಗೆ ಮೇರೆಗೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಆರೋಪಿಗಳು ಆಕಾಶಭವನದ ಶರಣ್ ಯಾನೆ ರೋಹಿದಾಸ್ನ ಸಹಚರರಾಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಶರಣ್ ತನ್ನದೇ ಆದ ಗ್ಯಾಂಗ್ ಕಟ್ಟಿದ್ದ. ಶ್ರೀಮಂತರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುವುದು, ಹಣಕಾಸಿನ ಡೀಲ್ ಮಾಡುವುದು, ಮಾದಕ ವಸ್ತುಗಳನ್ನು ಸಾಗಿಸುವುದು, ಮರಳು ದಂಧೆಯಲ್ಲಿ ತೊಡಗಿಸಿಕೊಳ್ಳುವುದು ಮುಂತಾದ ಅಕ್ರಮ ಚಟುವಟಿಕೆಗಳ ಮೂಲಕ ಹಣ ಗಳಿಸುವ ಉದ್ದೇಶವನ್ನು ಹೊಂದಿದ್ದ. ನಗರದಲ್ಲಿರುವ ಎಲ್ಲಾ ಗ್ಯಾಂಗ್ಗಳು ತನ್ನ ಹದ್ದುಬಸ್ತಿನಲ್ಲಿದ್ದು ಕಾರ್ಯಚರಿಸಬೇಕೆಂದು ಆತ ಬಯಸಿದ್ದ. ಹಾಗಾಗಿ ತನ್ನ ಎದುರಾಳಿ ಗ್ಯಾಂಗ್ ಅನ್ನು ಮಟ್ಟಹಾಕಲು ತೀರ್ಮಾನ ಮಾಡಿದ್ದ. ನಗರದಲ್ಲಿನ ಇನ್ನೊಂದು ಕ್ರಿಮಿನಲ್ ಗ್ಯಾಂಗ್ನಲ್ಲಿ ಸಕ್ರಿಯರಾಗಿರುವ ಪ್ರದೀಪ್ ಮೆಂಡನ್, ಮಂಕಿ ಸ್ಟ್ಯಾಂಡ್ ವಿಜಯಾ, ಗೌರೀಶ್ ಯಾನೆ ಗೌರಿ ಅವರ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಅವರನ್ನು ಬಂಧಿಸಲಾಗಿತ್ತು.
ಶರಣ್ ಅವರ ವಿರುದ್ಧ ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣ ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.