ಮಂಗಳೂರು, ಏ. 23 (DaijiworldNews/SM): ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಕಠಿಣ ನಿಯಮಗಳನ್ನೊಳಗೊಂಡ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದರು.
![](https://daijiworld.ap-south-1.linodeobjects.com/iWeb/tvdaijiworld/img_tv247/santhu_28022019_KOTA.jpg)
ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಅನಿವಾರ್ಯವಾಗಿ ಲಾಕ್ಡೌನ್ಗೆ ಸೂಚಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಮನೆಯಿಂದ ಹೊರಬರದೆ ಅವಶ್ಯವಿದ್ದಲ್ಲಿ ಮಾತ್ರ ಹೊರಬರಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ಪೀಡಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಸೇರಿದಂತೆ ಖಾಸಗೀಯ 66 ಆಸ್ಪತ್ರೆಗಳಲ್ಲಿ 4816 ಬೆಡ್ಗಳು ಖಾಯ್ದಿರಿಸಲಾಗಿದ್ದು, ಅವುಗಳಲ್ಲಿ 3035 ಸಾಮಾನ್ಯ ಬೆಡ್ಗಳು, 1263 ಆಕ್ಸಿಜೆನ್ ಬೆಡ್ಗಳು, 243 ಹೈಪ್ರೆಷರ್ ಬೆಡ್ಗಳು, 135 ಐಸಿಯು ಬೆಡ್ಗಳು, 140 ವೆಂಟಿಲೇಟರ್ ಐಸಿಯು ಬೆಡ್ಗಳನ್ನು ಕಾಯ್ದಿರಿಸಲಾಗಿದೆ ಎಂದರು. ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಪೂರಕ ಔಷಧಿಗಳು ಸೇರಿದಂತೆ ರೆಮಿಡೀಸ್ ಸಿವಿಯರ್ ಹಾಗೂ ಆಕ್ಸಿಜೆನ್ ಕೊರೊನಾ ಪೀಡಿತರಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದರೊಂದಿಗೆ ಅಗತ್ಯ ದಾಸ್ತಾನು ಇರುವಂತೆ ಎಚ್ಚರವಹಿಸಿಬೇಕು ಎಂದು ಸೂಚನೆ ನೀಡಿದರು.