ಮಂಗಳೂರು, ಏ.27 (DaijiworldNews/HR): ಏಪ್ರಿಲ್ 26 ರ ರಾತ್ರಿ ಉಳ್ಳಾಲದ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಾಶೋತ್ಸವ ಸಂಭ್ರಮಾಚರಣೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಜನರು ಗುಂಪಾಗಿ ಸೇರಿದ ಘಟನೆ ನಡೆದಿದೆ.







ಈ ಬಗ್ಗೆ ದೂರು ಸ್ವೀಕರಿಸಿದ ನಂತರ ಸಹಾಯಕ ಆಯುಕ್ತ(ಎಸಿ) ಮದನ್ ಮೋಹನ್ ದೇವಾಲಯದ ಆವರಣದ ಮೇಲೆ ದಾಳಿ ನಡೆಸಿ ನೆರೆದಿದ್ದ ಜನರನ್ನು ವಾಪಸ್ ಕಳುಹಿಸಿದ್ದಾರೆ.
ಈ ದೇವಾಲಯವು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರು ಭಾಗಿಯಾಗಿದ್ದರು ಎಂಬ ಆರೋಪದ ಮೇರೆಗೆ ಮುನ್ನೆಚ್ಚರಿಕೆಯಾಗಿ ಮೂರು ದಿನಗಳ ಹಿಂದೆಯೇ ಮಂಗಳೂರು ತಹಶೀಲ್ದಾರ್ ದೇವಸ್ಥಾನಕ್ಕೆ ನೋಟೀಸ್ ನೀಡಿದ್ದರು. ಅಲ್ಲದೆ ತಹಶೀಲ್ದಾರ್ ಅವರ ದೂರಿನ ಮೇರೆಗೆ ದೇವಸ್ಥಾನ ಆಡಳಿತ ಸಮಿತಿಯ ವಿರುದ್ಧ ಕೊರೊನಾ ರೋಗ ನಿಯಂತ್ರಣ ಕಾಯ್ದೆ, ಐಪಿಸಿ ಸೆಕ್ಷನ್ 269ರಡಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಹಾಯಕ ಆಯುಕ್ತ ಮದನ್ ಮೋಹನ್ ದೇವಸ್ಥಾನಕ್ಕೆ ದಾಳಿ ನಡೆಸಿ ಸೇರಿದ್ದ ಜನರನ್ನು ವಾಪಸ್ ತೆರಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.