ಉಪ್ಪಿನಂಗಡಿ, ಮೇ.02 (DaijiworldNews/HR): ಎಟಿಎಂ ಯಂತ್ರದಿಂದ ಹಣ ಕದಿಯಲು ಯತ್ನಿಸಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು 48 ಗಂಟೆಗಳೊಳಗೆ ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸವಣೂರು ಗ್ರಾಮದ ಶಾಂತಿನಗರ ಮಾಂತೇರು ನಿವಾಸಿ ಸಮೀರ್ ಯಾನೆ ಅಮ್ಮಿ (23) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂನಿಂದ ಹಣ ಕದಿಯಲು ಯತ್ನಿಸಿದ ಘಟನೆ ಎ.28ರಂದು ಬೆಳಕಿಗೆ ಬಂದಿದ್ದು, ಅಲ್ಲಿದ್ದ ಎರಡು ಮೆಷಿನ್ಗಳನ್ನು ಆಯುಧದಿಂದ ಜಖಂಗೊಳಿಸಿ ಒಡೆಯಲು ಯತ್ನಿಸಿ, ಮೂರು ಸಿಸಿ ಕ್ಯಾಮೆರಾಗಳನ್ನು ಹಾನಿಗೊಳಿಸಲಾಗಿತ್ತು. ಆದರೆ ಎಟಿಎಂನಿಂದ ಹಣ ಕಬಳಿಸಲು ಸಾಧ್ಯವಾಗಿರಲಿಲ್ಲ.
ದರೋಡೆಕೋರರು ಎಟಿಎಂ ಮೆಷಿನ್ ಮತ್ತು ಸಿಸಿ ಕ್ಯಾಮರಾ ಹಾನಿಗೆಡವಿದ್ದರಿಂದಾಗಿ 6 ಲಕ್ಷ ನಷ್ಟವಾಗಿದೆ ಎಂದು ಬ್ಯಾಂಕಿನ ಮ್ಯಾನೇಜರ್ ಶ್ರೀಧರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಶೇಷ ತಂಡ ರಚಿಸಿ, ತನಿಖೆ ಕೈಗೆತ್ತಿಕೊಂಡು ಮೇ 1ರಂದು ಆರೋಪಿಯನ್ನು ಸವಣೂರಿನಲ್ಲಿ ಬಂಧಿಸಿದ್ದು, ವಿಚಾರಣೆ ವೇಳೆ ಈತ ದರೋಡೆಗೆ ಯತ್ನಿಸಿದ್ದನ್ನು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.