ಮಂಗಳೂರು, ಮೇ 03 (DaijiworldNews/MB) : ಕೊರೊನಾ ಲಸಿಕೆ 2 ನೇ ಡೋಸ್ ವಿಳಂಬದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆರರಿಂದ ಎಂಟು ವಾರಗಳ ನಂತರವೂ ಎರಡನೇ ಡೋಸ್ ವ್ಯಾಕ್ಸಿನೇಷನ್ ಪಡೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ. ತಿಳಿಸಿದ್ದಾರೆ.

''ಕೋವಾಕ್ಸಿನ್ ಪೂರೈಕೆ ಸೀಮಿತವಾಗಿದೆ ಮತ್ತು ಜಿಲ್ಲೆಯಲ್ಲಿ ಈಗ ಸ್ಟಾಕ್ ಇಲ್ಲ'' ಎಂದು ಬಹಿರಂಗಪಡಿಸಿದ ಜಿಲ್ಲಾಧಿಕಾರಿ, ''ಸ್ಟಾಕ್ ಬಂದಾಗ, ಲಸಿಕೆ ಹಾಕಲಿರುವವರಿಗೆ ತಿಳಿಸಲಾಗುವುದು'' ಎಂದು ಹೇಳಿದರು.
"ಕೋವಿಶೀಲ್ಡ್ ಎರಡನೇ ಡೋಸ್ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ''ಡೋಸೇಜ್ಗಳ ಲಭ್ಯತೆಯ ಆಧಾರದ ಮೇಲೆ ನಾವು ಜನರನ್ನು ಕೇಂದ್ರಕ್ಕೆ ಭೇಟಿ ನೀಡುವಂತೆ ತಿಳಿಸುತ್ತೇವೆ. ಆರೋಗ್ಯ ಇಲಾಖೆ ಈ ಮಾಹಿತಿಯನ್ನು ನೀಡುತ್ತದೆ. ಮೊದಲ ಡೋಸ್ ಪಡೆಯುವವರು ಕೇಂದ್ರದಲ್ಲೇ ನೋಂದಣಿ ಮಾಡಲು ಯಾವುದೇ ಅವಕಾಶವಿಲ್ಲ. ಅವರು ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡು, ನಿಗದಿಯಾದ ದಿನಾಂಕದಂದು ಕೇಂದ್ರಗಳಿಗೆ ಭೇಟಿ ನೀಡಬೇಕು'' ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಲಸಿಕೆ ಪಡೆಯಲು ಹೆಚ್ಚು ಹೆಚ್ಚು ಜನರು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆ ಮೊದಲ ಡೋಸ್ ಪಡೆಯುವವರು ಆನ್ಲೈನ್ನಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.
ಇನ್ನು ಮೊದಲ ವ್ಯಾಕ್ಸಿನೇಷನ್ ಪಡೆದವರು ನಾಲ್ಕರಿಂದ ಐದು ವಾರಗಳ ಬಳಿಕ ಎರಡನೇ ಡೋಸ್ಗಾಗಿ ಕೇಂದ್ರಗಳಿಗೆ ಭೇಟಿ ನೀಡಿ ಬಳಿಕ ಹಿಂದಿರುಗುತ್ತಿದ್ದಾರೆ. ಭಾನುವಾರ, ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳು ಎರಡನೇ ಡೋಸ್ಗಾಗಿ ಯಾವುದೇ ಸ್ಟಾಕ್ ಇಲ್ಲ ಎಂದು ಜನರಿಗೆ ತಿಳಿಸಿದಾಗ, ಕೆಲವರು ಹತಾಶೆಯಿಂದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಮನೆಗೆ ವಾಪಾಸ್ ಬಂದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು ಏಳು ಕಂಟೈನ್ಮೆಂಟ್ ಝೋನ್ ಗುರುತಿಸಲಾಗಿದೆ. ಧರ್ಮಸ್ಥಳ, ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ತಲಾ ಎರಡು ಹಾಗೂ ಬೆಳ್ತಂಗಡಿಯಲ್ಲಿ ಒಂದು ಕಂಟೈನ್ಮೆಂಟ್ ಝೋನ್ ಇದೆ. ಸುರತ್ಕಲ್ನ ಹೊಸಬೆಟ್ಟೆಯಲ್ಲಿರುವ ವೃದ್ಧಾಶ್ರಮದ 20 ಮಂದಿಯಲ್ಲಿ ಎಂಟು ಮಂದಿ ಸೋಂಕು ದೃಢಪಟ್ಟಿದೆ. ಗಂಭೀರ ಸಮಸ್ಯೆಗಳಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ವೃದ್ಧಾಶ್ರಮದಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ.
ಧರ್ಮಸ್ಥಳದಲ್ಲಿ ಹತ್ತು ಕ್ಲಸ್ಟರ್ಗಳಿದ್ದು 17 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳನ್ನು ಒಂದಾಗಿಸಿ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಬಂಟ್ವಾಳ ಕಡೇಶಿವಾಲಯ (11 ಪ್ರಕರಣಗಳು), ಕುಕ್ಕಿಲಾ (10), ಜೆಪ್ಪಿನಮೊಗರು (7), ಪೊಸವಳಿಕೆ ಧರ್ಮಸ್ಥಳ 6) ಮತ್ತು ಶಿಶಿಲಾ (6 ಪ್ರಕರಣಗಳು) ಕಂಟೈನ್ಮೆಂಟ್ ಝೋನ್ಗಳೆಂದು ಗುರುತಿಸಲಾಗಿದೆ.
ಜಿಲ್ಲೆಯು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 2,500 ಡೋಸ್ಗಳಿವೆ. ಭಾನುವಾರ 508 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಕೊರೊನಾ ರೋಗಿಗಳು ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯನ್ನು ಎದುರಿಸದಂತೆ ನೋಡಿಕೊಳ್ಳಲು, ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ 50 ಪ್ರತಿಶತ ಹಾಸಿಗೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 75 ಪ್ರತಿಶತ ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ಯಾವುದೇ ಕೊರೊನಾ ಸಂಬಂಧಿತ ಸಮಸ್ಯೆ ಇದ್ದರೆ, ಈ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಉಳ್ಳಾಲ ಸಹಾರ ಆಸ್ಪತ್ರೆ (ನಿರಂಜನ್ - ಜಿಲ್ಲಾಧಿಕಾರಿಯ ತಾಂತ್ರಿಕ ಸಹಾಯಕ 9591225763), ತೇಜಸ್ವಿನಿ ಆಸ್ಪತ್ರೆ ಕದ್ರಿ (ಪ್ರವೀಣ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ (9449258204) ಎಂದು ಇಲಾಖೆ ತಿಳಿಸಿದೆ.