ಕಾಸರಗೋಡು, ಮೇ.14 (DaijiworldNews/HR): ಬದಿಯಡ್ಕದ ಏತಡ್ಕ ಪರಿಸರದಲ್ಲಿ ಅಪೂರ್ವ ಜೀವಿಯೊಂದರ ಹೆಜ್ಜೆ ಗುರುತು ಪತ್ತೆಯಾಗಿದ್ದು, ಎರಡು ನಾಯಿಗಳ ಮೇಲೆ ದಾಳಿ ನಡೆಸಿರುವುದರಿಂದ ಏತಡ್ಕ ಪರಿಸರದ ನಾಗರಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಚಿರತೆ ಅಥವಾ ಹುಲಿಯ ಹೆಜ್ಜೆ ಗುರುತು ಆಗಿರಬಹುದು ಎಂದು ಶಂಕಿಸಲಾಗಿದ್ದರೂ ಈ ಬಗ್ಗೆ ಇನ್ನೂ ಸ್ಪಷ್ಟ ಗೊಂಡಿಲ್ಲ. ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಪಳ್ಳಿತ್ತಡ್ಕದ ಉಮೇಶ್ ಎಂಬವರ ಮನೆಯ ನಾಯಿ ಮುಂಜಾನೆ ಕಿರುಚಾಡುವುದನ್ನು ಕಂಡು ಹೊರ ಬಂದಾಗ ಪ್ರಾಣಿಯೊಂದು ಪರಾರಿಯಾಗುತ್ತಿರುವುದನ್ನು ಗಮನಿಸಿದ್ದಾರೆ. ನಾಯಿಯ ಮೇಲೆ ಈ ಪ್ರಾಣಿ ದಾಳಿ ನಡೆಸಿದ್ದು, ಅದೇ ಪರಿಸರದ ಇನ್ನೊಂದು ಸಾಕು ನಾಯಿ ಮೇಲೂ ದಾಳಿ ನಡೆಸಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಹುಲಿಯ ಹೆಜ್ಜೆಗೆ ಸಾಮ್ಯತೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಪರಿಸರದಲ್ಲಿ ಎರಡರಿಂದ ಮೂರು ದಿನಗಳ ಕಾಲ ನಿಗಾ ಇಡಲು ಅರಣ್ಯಾಧಿಕಾರಿಗಳು ತೀರ್ಮಾನಿಸಿ ಶೋಧ ಮುಂದುವರಿಸಿದ್ದಾರೆ.