ಮಂಗಳೂರು, ಮೇ.14 (DaijiworldNews/PY): "ಕೊರೊನಾ ಎರಡನೇ ಅಲೆಯ ತೀವ್ರತೆಯ ಬಗ್ಗೆ ತಜ್ಞರ ವರದಿ ಹಾಗೂ ಸಲಹೆ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳದೆ ಅಸಡ್ಡೆ ತೋರಿಸಿ, ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಮತ್ತು ಜನರನ್ನು ದುಸ್ಥಿತಿಗೆ ತಳ್ಳಿರುವ ಆಡಳಿತಾರೂಢ ಬಿ.ಜೆ.ಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯಿಂದಾಗಿ ವಿಶ್ವದಾದ್ಯಂತ ಭಾರತವು ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ಬೇಜವಾಬ್ದಾರಿತ ಹೇಳಿಕೆ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು" ಎಂದು ಮಾಜಿ ಸಚಿವ ಹಾಗೂ ಮಾಜಿ ಸಂಸದರಾದ ವಿನಯ್ ಕುಮಾರ್ ಸೊರಕೆಯವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರು ಅವರು, "ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಇಲ್ಲ, ಔಷದಿ ಇಲ್ಲ, ಆಂಬ್ಯುಲೆನ್ಸ್ ಇಲ್ಲ ಒಟ್ಟಾರೆ ಕೊರೊನಾ ನಿರ್ವಹಣೆಗೆ ಯಾವುದು ಅತ್ಯಗತ್ಯವೋ ಅದ್ಯಾವುದೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರದ ಆಡಳಿತವೇ ಪ್ರಮುಖ ಕಾರಣವಾಗಿದೆ. ಇದನ್ನೆಲ್ಲಾ ಮನಗಂಡು ಮೂಕಪ್ರೇಕ್ಷಕನಾಗಿರಲು ಬಯಸದ ಸುಪ್ರೀಂಕೋರ್ಟ್ ಸ್ವಯಂಪ್ರೇರಿರಿತವಾಗಿ ಮಧ್ಯಸ್ಥಿಕೆ ವಹಿಸಿ ತಜ್ಞರು ಮತ್ತು ಅನುಭವಿ ವೈದ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಕಾರ್ಯಪ್ರವೃತ್ತರಾಗುವಂತೆ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರದ ಆಡಳಿತ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸಿರುವ ನ್ಯಾಯಾಲಯದ ಆದೇಶವನ್ನು ಅರಗಿಸಿಕೊಳ್ಳಲು ಆಗದೆ, ಬಾಲಿಶವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ವಿ.ಸದಾನಂದ ಗೌಡರು ನಾವೇನು ನೇಣುಹಾಕಿಕೊಂಡು ಸಾಯಬೇಕಾ ಎಂದು ಕೇಳಿದರೆ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ನ್ಯಾಯಾಧೀಶರನ್ನೇ ಅಣಕಿಸಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮತ್ತು ನ್ಯಾಯಾಂಗ ನಿಂದನೆ ಎಸಗಿದ್ದಾರೆ" ಎಂದಿದ್ದಾರೆ.
"ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಈ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು ರಾಜ್ಯದ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲರಾಗಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಸದಾನಂದ ಗೌಡರೇ, ತಾವು ನೇಣಿಗೆ ಶರಣಾಗುವ ಬದಲು ತಮ್ಮ ಸಂಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಗೆ ಶರಣಾಗುವುದು ಒಳಿತು ಹಾಗೂ ಶಾಸಕ ಸಿ. ಟಿ. ರವಿಯವರು ನ್ಯಾಯಾಧೀಶರ ಬಗ್ಗೆ ನೀಡಿರುವ ಹೇಳಿಕೆಯು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಯೋಗ್ಯವಾಗಿರುವುದರಿಂದ ತಮ್ಮ ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
"ಪ್ರಸಕ್ತ ಪರಿಸ್ಥಿತಿಯಲ್ಲಿ ಸೋಂಕಿತರ ಶುಶ್ರೂಷೆಗೆ ಸ್ಪಂದಿಸಿ ಅಗತ್ಯವಿರುವ ಔಷಧಿಗಳು, ಆಮ್ಲಜನಕ, ವೆಂಟಿಲೇಟರ್ಗಳನ್ನು ಪೂರೈಸುವಲ್ಲಿ ಎಡವಿರುವ ಸರ್ಕಾರ ದಿನೇ ದಿನೇ ರೈತರಿಗೆ ಅಗತ್ಯವಿರುವ ರಸಗೊಬ್ಬರ ದ ಬೆಲೆಯನ್ನು ಏರಿಸುವುದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ತನ್ನ ಜನವಿರೋಧಿ ಧೋರಣೆಯನ್ನು ಮುಂದುವರಿಸಿದೆ. ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಊಟಕ್ಕೆ ಪರದಾಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೇ ಬಡವರ ವಿರೋಧಿಯಾಗಿ ವರ್ತಿಸುತ್ತಿರುವುದು ಖಂಡನೀಯ" ಎಂದಿದ್ದಾರೆ.
ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿ ಆಯಾ ದೇಶದ ಆಡಳಿತಾರೂಢ ಸರ್ಕಾರಗಳು ಸಮಯಪ್ರಜ್ಞೆ ಮತ್ತು ಕರ್ತವ್ಯಪ್ರಜ್ಞೆಯನ್ನು ಮೆರೆದು ಕಾರ್ಯಪ್ರವೃತ್ತರಾದುದರಿಂದ ಚೇತರಿಸಿಕೊಂಡಿದ್ದರೆ ಭಾರತದ ಮತ್ತು ಕರ್ನಾಟಕದ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ. ಅಧೋಗತಿಯತ್ತ ಸಾಗುತ್ತಿದೆ. ಸರ್ಕಾರದ ಹೊಣೆಗೇಡಿತನದ ನೀತಿಗಳಿಂದಾಗಿ ಜನರ ಜೀವನದ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಸರ್ಕಾರವು ಒಂದು ಕ್ಷಣವೂ ಅಧಿಕಾರದಲ್ಲಿರಲು ನೈತಿಕತೆ ಯನ್ನು ಉಳಿಸಿಕೊಂಡಿಲ್ಲ. ಹಾಗಾಗಿ ದೇಶದ ಪ್ರಧಾನಮಂತ್ರಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ತಮ್ಮ ಹುದ್ದೆಗಳಿಂದ ಕೆಳಗಿಳಿದು ದೇಶವನ್ನು ಮತ್ತು ಜನರ ಪ್ರಾಣವನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.