ಮಂಗಳೂರು, ಮೇ.14 (DaijiworldNews/HR): ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಲಿರುವ ತೌಕ್ತೆ ಚಂಡಮಾರುತ ಕುರಿತು ಸಾರ್ವಜನಿಕರಿಗೆ ಜಾಗೃತರಾಗಿರುವಂತೆ ಶಾಸಕ ವೇದಾವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.

ಈಗಾಗಲೇ ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಗಳನ್ನು ಪಾಲಿಸಿಕೊಂಡು ಸುರಕ್ಷಿತರಾಗಿರಬೇಕು. ಮಳೆ ಬಂದಾಗ ಮುಳುಗಡೆಯಾಗುವ ಸುಲ್ತಾನ್ ಬತ್ತೇರಿ, ಬೊಕ್ಕಪಟ್ಣ, ಕುದ್ರೋಳಿ, ಬಂದರ್ ಪ್ರದೇಶ, ಹೈೂಗೆಬಜಾರ್,ಬೋಳಾರ ಲೀವೆಲ್, ನೇತ್ರಾವತಿ ನದಿ ತೀರದ ಜಪ್ಪಿನಮೊಗರು, ಬಜಾಲ್, ಕಣ್ಣೂರು, ಜಪ್ಪಿನಮೊಗರು ಕುದ್ರು, ತೋಟ ಬೆಂಗ್ರೆ, ಕಸಬಾ ಬೆಂಗ್ರೆ, ಬೊಕ್ಕಪಟ್ಣ ಬೆಂಗ್ರೆ ಭಾಗಗಳಲ್ಲಿನ ಜನರು ಜಾಗರೂಕರಾಗಿರಿ. ಮಳೆಯಿಂದ ನೆರೆ ಉಂಟಾಗಬಹುದಾದ ಸ್ಥಳಗಳಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹಿರಿಯ ನಾಗರಿಕರು, ಮಹಿಳೆಯರ,ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸಮುದ್ರ ತೀರದಲಿ ವಾಸಿಸುವ ನಾಗರಿಕರು ಹೆಚ್ಚು ಜಾಗೃತರಾಗಿರಿ. ಇನ್ನೆರಡು ದಿನಗಳ ಕಾಲವಿಪರೀತ ಮಳೆ ಸುರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ. ಹಾಗಾಗಿ ಯಾರೂ ಕೂಡ ಅಜಾಗರೂಕತೆಯಿಂದಿರಬಾರದು. ರಾಜಕಾಲುವೆಗಳ ಸಮೀಪದ ಮನೆಯವರೂ ಕೂಡ ಜಾಗೃತರಾಗಿರಿ. ತೀರ ನದಿ ಸಮೀಪದಲ್ಲಿ ವಾಸಿಸುವ ಜನರು ಚಂಡಮಾರುತದ ಭೀತಿ ತಪ್ಪುವವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದಿದ್ದಾರೆ.