ಉಡುಪಿ, ಮೇ.14 (DaijiworldNews/HR): ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ 31ನೇ ಯತಿಯಾಗಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ಪೀಠಾರೋಹಣಗೈದಿದ್ದಾರೆ.

















2018ರ ಜುಲೈ 19ರಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಪರಂಧಾಮಗೈದ ಬಳಿಕ ಶೀರೂರು ಮಠದ ಸನ್ಯಾಸ ಪೀಠ ಖಾಲಿ ಉಳಿದಿತ್ತು.
ಅಕ್ಷಯ ತೃತಿಯಾ ಶುಭದಿನದಂದು ದ್ವಂದ್ವ ಮಠಾಧೀಶ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮೂಲ ಮಠದಲ್ಲಿ ನೂತನ ಯತಿಗೆ ನಾಮಕರಣ ಮಾಡಿ, ಶೀರೂರು ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆಸಿದರು.
ಅದಕ್ಕೂ ಪೂರ್ವದಲ್ಲಿ ಪುರುಷಸೂಕ್ತ ಹೋಮ, ವಿರಜಾ ಹೋಮ ಹಾಗೂ ವೇದವ್ಯಾಸ ಮಂತ್ರ ಹೋಮ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಗಿರಿರಾಜ ಉಪಾಧ್ಯಾಯ ಹಾಗೂ ನಾರಾವಿ ಗುರುರಾಜ ಭಟ್ ನೇತೃತ್ವದಲ್ಲಿ ನಡೆದವು.
ಮಧ್ಯಾಹ್ನ 12.35ರ ಸುಮುಹೂರ್ತದಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಸಹಿತ ಸಾಲಿಗ್ರಾಮವನ್ನಿರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕ ಅಂಗವಾಗಿ ಅಭಿಷೇಕ ನಡೆಸಿದರು.
ಬಳಿಕ ನೂತನ ಯತಿಯ ನಾಮಧೇಯ ಘೋಷಿಸಿದರು. ಬಳಿಕ ಸೋದೆ ಶ್ರೀಗಳು ಹಾಗೂ ಶೀರೂರು ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು..
ನೂತನ ಯತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ಅನಿರುದ್ಧ ಸರಳತ್ತಾಯ. ಧರ್ಮಸ್ಥಳ ಸಮೀಪದ ನಿಡ್ಲೆಯವರಾದ ಉದಯಕುಮಾರ್ ಸರಳತ್ತಾಯ ಹಾಗೂ ಶ್ರೀವಿದ್ಯಾ ದಂಪತಿ ಪುತ್ರ. 10ನೇ ತರಗತಿಯ ವರೆಗೆ ಲೌಕಿಕ ಶಿಕ್ಷಣ ಪಡೆದಿದ್ದು, ಮುಂದಿನ ವೇದಾಧ್ಯಯನವನ್ನು ಶಿರಸಿ ಸೋಂದಾ ಕ್ಷೇತ್ರದಲ್ಲಿ ಪಡೆಯಲಿದ್ದಾರೆ.
ಶೀರೂರು ಮಠದ ನೂತನ ಯತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ಸಂಜೆ ತಮ್ಮ ಗುರುಗಳಾದ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರೊಡಗೂಡಿ ಶ್ರೀಕೃಷ್ಣಮಠಕ್ಕೆ ಆಗಮಿಸಿದರು.
ಅದಕ್ಕೂ ಮುನ್ನ ನೂತನ ಯತಿಗಳನ್ನು ಮಠೀಯ ಪರಂಪರೆಯಂತೆ ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ವೇದ- ವಾದ್ಯ ಘೋಷದೊಂದಿಗೆ ಬರಮಾಡಿಕೊಳ್ಳಲಾಯಿತು.
ಅನಂತೇಶ್ವರ, ಚಂದ್ರೇಶ್ವರ ದೇವರ ದರ್ಶನದ ಬಳಿಕ ಕನಕ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಗೌರವಾದರಗಳಿಂದ ಬರಮಾಡಿಕೊಂಡರು. ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿಸಿದರು. ಬಳಿಕ ಚಂದ್ರಶಾಲೆಯಲ್ಲಿ ಮಾಲಿಕಾ ಮಂಗಳಾರತಿ ನಡೆಯಿತು.
ನಂತರ ಶೀರೂರು ಮಠವನ್ನು ಪ್ರವೇಶ ಮಾಡಿದ ಅವರಿಗೆ ಭಕ್ತರಿಂದ ಸ್ವಾಗತ ಕೋರಲಾಯಿತು. ನಂತರ ಅಷ್ಟಮಠದ ಯತಿಗಳಿಗೆ ಗೌರವ ಸಲ್ಲಿಸಿದರು.
ಪರ್ಯಾಯ ಶ್ರೀಪಾದರಿಗೆ ಶೀರೂರು ಶ್ರೀಪಾದರು ಗಂಧಾದ್ಯುಪಚಾರ ಹಾಗೂ ಮಾಲಿಕಾ ಮಂಗಳಾರತಿ ಬೆಳಗಿದರು. ಪರ್ಯಾಯ ಅದಮಾರು ಮಠದ ವತಿಯಿಂದ ನೂತನ ಯತಿಯನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ದ್ವೈತ ಸಿದ್ಧಾಂತ ಪ್ರತಿಪಾದನಾಚಾರ್ಯ ಲೋಕಗುರು ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿಠಲಪಾದಪದ್ಮಾರಾಧಕ ಶ್ರೀ ವಾಮನತೀರ್ಥ ಯತಿ ಪರಂಪರೆಯ ಶೀರೂರು ಮಠದ ನೂತನ ಉತ್ತರಾಧಿಕಾರಿ ಹಾಗೂ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಕರಕಮಲಸಂಜಾತ ರಾದ ಶ್ರೀ ವೇದವರ್ಧನತೀರ್ಥರ ಹೆಸರಿನಂತೆ ಮಠದಲ್ಲಿ ವೇದೋತ್ಕರ್ಷವಾಗಲಿ ಎಂದು ಹಾರೈಸಿದರು.
ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್, ಪಾರುಪತ್ಯಗಾರ ಲಕ್ಷ್ಮೀಶ ಭಟ್, ರೋಹಿತ್ ತಂತ್ರಿ, ವೈ. ಎನ್. ರಾಮಚಂದ್ರ ರಾವ್, ಉದಯ ಸರಳತ್ತಾಯ ಮೊದಲಾದವರಿದ್ದರು.