ಮಂಗಳೂರು, ಮೇ 14 (DaijiworldNews/SM): ದೇಶದಲ್ಲಿ ಫೆಬ್ರವರಿಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಆ ಸಂದರ್ಭದಲ್ಲಿ ತುಂಬಾ ಜನ ಸರಕಾರವನ್ನು ಟೀಕಿಸಿದ್ದರು. ಬಿಜೆಪಿಯ ಲಸಿಕೆ ಎಂಬುವುದಾಗಿ ಆರೋಪಿಸಿದ್ದರು. ಆದರೆ, ಅದೇ ಪಕ್ಷಗಳು ಇದೀಗ ಲಸಿಕೆ ಇಲ್ಲ ಎಂಬುವುದಾಗಿ ಬೊಬ್ಬೆ ಇಡುತ್ತಿವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಲಸಿಕೆ ಅಭಿಯಾನ ಆರಂಭಿಸಿದ ಸಂದರ್ಭದಲ್ಲಿ ಲಸಿಕೆಯ ನಂಬಿಕೆ ಏನು? ಯಾಕೆ ತೆಗೆದುಕೊಳ್ಳಬೇಕೆಂದು ಪ್ರಶ್ನಿಸಿದ್ದರು. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ, ಅವರೇ ಇದೀಗ ಲಸಿಕೆ ಇಲ್ಲ ಎಂದು ಆರೋಪಿಸುತ್ತಿದ್ದಾರೆ.
ಲಸಿಕೆ ವಿಚಾರದಲ್ಲಿ ರಾಜಕಾರಣ ಮಾಡಬಾರದಿತ್ತು. ಜನರ ಪ್ರಾಣದ ಜೊತೆ ಚೆಲ್ಲಾಟವಾಡಬಾರದಿತ್ತು. ಇದೇ ವಿರೋಧಿಸಿದ ಪಕ್ಷಗಳೇ ಇಂದು ರಾಜ್ಯದಲ್ಲಿ ಕೋವಿಡ್ ಸಾವಿಗೆ ಕಾರಣವಾಗಿದ್ದಾರೆ. ಜನರ ದಾರಿ ತಪ್ಪಿಸಿದ ಹಿನ್ನೆಲೆ ಕೋವಿಡ್ ನಿಂದ ಸಾವು ನೋವು ಸಂಭವಿಸಿದೆ ಎಂಬುವುದಾಗಿ ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.