ಮಂಗಳೂರು, ಮೇ 15 (DaijiworldNews/MB) : ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವ ಮತ್ತು ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ಮೇಲೆ ಪೊಲೀಸರು ಬಲಪ್ರಯೋಗ ಮಾಡುವ, ಲಾಠಿ ಬೀಸುವ ಇತರ ಜಿಲ್ಲೆಗಳ ವರದಿಗಳನ್ನು ನಾವು ಓದುತ್ತಿದ್ದೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಲಾಠಿ ಪ್ರಯೋಗ ಮಾಡದೆಯೇ ಪರಿಸ್ಥಿತಿ ನಿಭಾಯಿಸುತ್ತಿರುವ ಹಿನ್ನೆಲೆ ಮಾದರಿಯಾಗಿದ್ದಾರೆ.

ಇನ್ನು ಇಷ್ಟಕ್ಕೆ ಇಲ್ಲಿನ ನಾಗರಿಕರು ಕಾನೂನು ಪಾಲಿಸುತ್ತಿದ್ದಾರೆ ಎಂದು ನಾವು ಭಾವಿಸಬೇಕಾಗಿಲ್ಲ. ಪೊಲೀಸರು ಸಂಯಮದಿಂದ ವರ್ತಿಸಿ ನಿಯಮ ಉಲ್ಲಂಘಿಸಿದ ಜನರಿಗೆ ಥಳಿಸಿಲ್ಲ. ಯಾವುದೇ ಮಾನ್ಯ ಕಾರಣವಿಲ್ಲದೆ ನಗರಕ್ಕೆ ಬರುವವರ ವಾಹನ ನಿಲ್ಲಿಸಿ ವಾಪಸ್ ಕಳುಹಿಸಲಾಗುತ್ತಿದೆ. ಹಾಗೆಯೇ ಮಾರ್ಗಸೂಚಿ ಉಲ್ಲಂಘಿಸಿದರೆ ಆ ವಾಹನವನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿದೆ. ಪೊಲೀಸರು ಬಲಪ್ರಯೋಗ ಮಾಡದೆಯೇ ಕಾರ್ಯ ನಿರ್ವಹಿಸುತ್ತಿರುವ ಶೈಲಿಗೆ ಸಾರ್ವಜನಿಕ ವಲಯದಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಲಾಠಿಗಳು ಇರುವುದೇ ಹೊಡೆಯಲು ಎಂಬ ಮನೋಭಾವನೆಯನ್ನು ದಕ್ಷಿಣ ಕನ್ನಡ ಪೊಲೀಸರು ಸುಳ್ಳಾಗಿಸಿದ್ದಾರೆ. ಪೊಲೀಸರು ಕೆಲವೊಮ್ಮೆ ಲಾಠಿ ಹಿಡಿದಿದ್ದು ನಗರಕ್ಕೆ ಬರುವ ಜನರು ಲಾಠಿಯನ್ನು ನೋಡಿಯೇ ವಾಪಾಸ್ ತೆರಳಿರುವ ಘಟನೆಗಳೂ ನಡೆದಿದೆ.
ಇನ್ನು ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿರುವ ಸಮಯಾವಕಾಶದಲ್ಲಿ ಅನೇಕ ಮಂದಿ ಬೀದಿಗಿಳಿದು ಮಾರುಕಟ್ಟೆಗಳಲ್ಲಿ ಕಿಕ್ಕಿರಿದು ತುಂಬಿರುತ್ತಾರೆ. ಇಂತಹ ಸಂದರ್ಭದಲ್ಲೂ ಪೊಲೀಸರು ತಾಳ್ಮೆ ಕಳೆದುಕೊಳ್ಳದೆ, ಪೊಲೀಸರ ಮಾತು ಕೇಳದೆ ನಿಯಮ ಉಲ್ಲಂಘಿಸಿದವರಿಗೆ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ. ಹಾಗೆಯೇ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣ ಕಾಯ್ದೆಯಡಿ ವಾಹನವನ್ನು ವಶಕ್ಕೆ ಪಡೆದು ವಾಹನ ಮಾಲೀಕರ ವಿರುದ್ದ ದೂರು ದಾಖಲಿಸುತ್ತಿದ್ದಾರೆ. ಇದರಿಂದಾಗಿ ಲಾಕ್ಡೌನ್ ನಿಯಮ ಉಲ್ಲಂಘಿಸಿದವರು ನ್ಯಾಯಾಲಯದಲ್ಲಿ ದಂಡವನ್ನು ಪಾವತಿಸಿ ವಾಹನ ವಾಪಾಸ್ ಪಡೆಯಬೇಕಾಗಿದೆ. ಇನ್ನು ಈ ಪ್ರಕರಣದಡಿ ಜಾಮೀನು ಪಡೆಯುವುದು ಸಹ ಕಷ್ಟಕರವಾಗಿದೆ. ಈ ಬಗ್ಗೆ ಪೊಲೀಸರು ಸಾರ್ವಜನರಿಕರಿಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ.
''ಜನರಿಗೆ ಅನಗತ್ಯವಾಗಿ ಥಳಿಸುವುದರ ವಿರುದ್ದ ಸೂಚನೆಗಳು ಇದೆ. ಹಾಗೆಯೇ ಜನರು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಹೇಳಿದ್ದಾರೆ.
ಇನ್ನು ಮಂಗಳೂರಿನ ಉಪ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್ ಮಾತನಾಡಿ, ''ಕಠಿಣ ಕೃತ್ಯಗಳ ಅಡಿಯಲ್ಲಿ ಪ್ರಕರಣಗಳು ದಾಖಲಾದ ಬಳಿಕ ನಗರಕ್ಕೆ ಬರುವ ವಾಹನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಲ್ಲಿನ ಜನರು ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತರಾಗಿ ಕಾನೂನನ್ನು ಗೌರವಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.