ಪುಂಜಾಲಕಟ್ಟೆ, ಮೇ.15 (DaijiworldNews/PY): ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಅಂಗಣದಲ್ಲಿ ದುಷ್ಕರ್ಮಿಗಳು ಬಾಟಲ್ ಒಡೆದು, ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ಎಸಗಿರುವ ಘಟನೆ ಮೇ 14ರ ಶುಕ್ರವಾರದಂದು ನಡೆದಿದೆ.

ಘಟನೆ ಸಾರ್ವಜನರಿಕ ಗಮನಕ್ಕೆ ಬಂದಿದ್ದು, ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ. ಈ ಕಾರಣಿಕ ಕ್ಷೇತ್ರದೊಳಗೆ ಶ್ರೀ ಕೋಡಮಣಿತ್ತಾಯ ಸೇರಿದಂತೆ ಶ್ರೀ ಪಿಲಿಚಾಮುಂಡಿ ಹಾಗೂ ಬ್ರಹ್ಮಬೈದೆರ್ಕಳ ದೈವಸ್ಥಾನವಿದೆ. ಇದರ ಸುತ್ತ ದುಷ್ಕರ್ಮಿಗಳು ಸುಮಾರು 20ಕ್ಕೂ ಹೆಚ್ಚು ಗಾಜಿನ ಬಾಟಲಿಗಳನ್ನು ಒಡೆದು ಹಾಕಿದ್ದು, ಗರಡಿಯೊಳಗೆ ಯಾರಿಗೂ ನಡೆದಾಡದಂತೆ ಕೃತ್ಯ ಎಸಗಿದ್ದಾರೆ.
ಘಟನೆಯ ಬಗ್ಗೆ ಮೇ 15ರ ಶನಿವಾರ ದೂರು ನೀಡಲಾಗುತ್ತಿದ್ದು, ಕೊಡಮಣಿತ್ತಾಯ ಬ್ರಹ್ಮಬೈದೆರ್ಲು ಕಿಡಿಗೇಡಿಗಳು ಯಾರೆಂದು ತೋರಿಸಿಕೊಡಬೇಕು ಎಂದು ಮೇ 16ರ ರವಿವಾರದಂದು ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಮತ್ತಿತರ ಹಿಂದೂ ಸಂಘಟನೆಗಳು ಖಂಡಿಸಿವೆ.