ಉಳ್ಳಾಲ, ಮೇ.15 (DaijiworldNews/HR): ಚಂಡಮಾರುತಕ್ಕೆ ಉಳ್ಳಾಲ ಮತ್ತು ಸೋಮೇಶ್ವರ ಸಮುದ್ರ ತೀರ ಪ್ರಕ್ಷುಬ್ದಗೊಂಡಿದ್ದು, ಉಳ್ಳಾಲ ಭಾಗದಲ್ಲಿ 15 ಮತ್ತು ಸೋಮೇಶ್ವರದಲ್ಲಿ 50 ಮನೆಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ.









ಶನಿವಾರ ಬೆಳಿಗ್ಗೆನಿಂದ ಉಳ್ಳಾಲದಾದ್ಯಂತ ಭಾರೀ ಗಾಳಿ ಮಳೆ ಉಂಟಾಗಿತ್ತು. ಮಧ್ಯಾಹ್ನ 11ರ ನಂತರ ಸಮುದ್ರ ತೀರ ಪ್ರಕ್ಷುಬ್ದಗೊಂಡಿದ್ದು, ಹಲವು ತೆಂಗಿನಮರಗಳು, ಎರಡು ವಿದ್ಯುತ್ ತಂತಿಗಳು ನೆಲಕ್ಕುರುಳಿತು. ಅಳಿವೆ ಬಾಗಿಲಿನಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಹೂಳು ತೆಗೆಯಲು ಸಾಧ್ಯವಾಗದೆ ಕುದ್ರು ಪ್ರದೇಶದಲ್ಲಿ 40 ಮನೆಗಳು ಜಲಾವೃತಗೊಂಡಿದ್ದು, ಅವರೆಲ್ಲರನ್ನು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ದೋಣಿ ಮೂಲಕ ಸ್ಥಳೀಯರು ಹಾಗೂ ಸೋಮೇಶ್ವರ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಾಂತರಿಸುವಲ್ಲಿ ಕೈಜೋಡಿಸಿದರು.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಪ್ಪಾಡಿ ಸಮೀಪದ ಕುದ್ರು ಪ್ರದೇಶದಲ್ಲಿ ಸಮುದ್ರದ ನೀರು ಇಕ್ಕಟ್ಟಾಗಿ 40 ರಿಂದ 50 ಮನೆಗಳು ಜಲಾವೃತಗೊಂಡಿದ್ದು, ತಕ್ಷಣಕ್ಕೆ ಸ್ಪಂಧಿಸಿದ ಸೋಮೇಶ್ವರ ಪುರಸಭೆ ಅಧಿಕಾರಿಗಳು 40 ಕುಟುಂಬಗಳ ಮಂದಿಯನ್ನು ಸ್ಥಳಿಯರ ಸಹಕಾರದೊಂದಿಗೆ ದೋಣಿ ಮೂಲಕ ಕರೆತಂದು ಉಚ್ಚಿಲ ರೈಲ್ವೇ ಹಳಿ ಸಮೀಪವಿರುವ ದಾರುಸ್ಸಲಾಂ ಮದರಸದಲ್ಲಿ ಹಲವರಿಗೆ ಆಶ್ರಯ ಕಲ್ಪಿಸಿದರೆ ಇನ್ನುಳಿದ ಮಂದಿ ಸಂಬಂಧಿಕರ ಮನೆಯತ್ತ ತೆರಳಿದರು.
ಸೋಮೇಶ್ವರ ದೇವಸ್ಥಾನ ಬಳಿಯ ಮೋಹನ್ ಮತ್ತು ಯೋಗೀಶ್ ಹಾಗೂ ಉಚ್ಚಿಲದಲ್ಲಿರುವ ತಾರನಾಥ್ ಮಾಸ್ಟರ್ ಎಂಬವರ ಮನೆ ಸಂಪೂರ್ಣ ಸಮುದ್ರಪಾಲಾಗಿದ್ದು, ಮೂರು ಮನೆ ಮಂದಿಯೂ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮೆಸ್ಕಾಂನ ತಂತಿಗಳು ನೆಲಕ್ಕುರುಳಿದ್ದು, ಅದನ್ನು ಸಂಜೆ ವೇಳೆ ಇಲಾಖೆ ದುರಸ್ತಿಗೊಳಿಸಿದೆ.
ಇನ್ನು ಸೋಮೇಶ್ವರದ ಹಿಂದೂ ರುದ್ರಭೂಮಿಗೆ ಶುಕ್ರವಾರದಂದೇ ಬಿರುಸುಗೊಂಡಿದ್ದ ಸಮುದ್ರದ ಅಲೆಗಳು ಬಡಿದು ತಡೆಗೋಡೆ ಸಮುದ್ರಪಾಲಾಗಿತ್ತು. ಶನಿವಾರ ಮಧ್ಯಾಹ್ನ ವೇಳೆಗೆ ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ. ಸೋಮೇಶ್ವರ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದಾಗಿ ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾ.ಹೆ66 ರ ಉಚ್ಚಿಲ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ರಸ್ತೆ ನಿರ್ಮಾಣ ಮಾಡಿರುವುದರ ವಿರುದ್ಧ ಈ ಹಿಂದೆ ಸ್ಥಳೀಯರು ದುರಸ್ತಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಇದೀಗ ಮತ್ತೆ ರಸ್ತೆ ಜಲಾವೃತಗೊಂಡು ವಾಹನ ಸವಾರರಿಗೆ ತೊಂದರೆಯಾಗಿದೆ. ಸೋಮೇಶ್ವರ ಪುರಸಭೆ ಚರಂಡಿ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದೆ.