ಕುಂದಾಪುರ, ಆ 15 (DaijiworldNews/PY): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾವೆಲ್ಲರೂ, ಪ್ರಕೃತಿಯ ಮುಂದೆ ನಮ್ಮ ಸೀಮಿತ ಸಾಮರ್ಥ್ಯ ಮತ್ತೆ ಮತ್ತೆ ಸಾಬೀತಾಗಿರುವುದನ್ನು ಮನಗಂಡು, ‘ಪ್ರಕೃತಿಯೊಂದಿಗೆ ಅಭಿವೃದ್ಧಿ ಮತ್ತು ಭವಿಷ್ಯ’ ಎನ್ನುವ ತತ್ವದಡಿ ಮುನ್ನೆಡಯಬೇಕಿದೆ. ಕರಾವಳಿಯ ನೆಲ- ಜಲದ ಸಂರಕ್ಷಣೆಯೊಂದಿಗೆ ಕೃಷಿ - ಪ್ರವಾಸೋದ್ಯಮ, ಯುವಜನ ಸಬಲೀಕರಣ - ಕೌಶಲಾಭಿವೃದ್ಧಿಯ ಕ್ಷೇತ್ರಗಳಿಗೆ ಆದ್ಯತೆ ನೀಡಲು ಆಡಳಿತ ಬದ್ಧ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು.
















ಅವರು ಭಾನುವಾರ ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.
"ಹೋರಾಟದ ಉತ್ಸಾಹ, ತ್ಯಾಗ ಭಾವನೆಗಳ ಮೂಲಕ ಹುತಾತ್ಮರನ್ನು ನೆನೆಯುತ್ತ, ಸವಾಲುಗಳನ್ನೆದುರಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ. ಪ್ರಧಾನಿಯವರ ಆಶಯದಂತೆ, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು 75ರ ಯೋಜನೆಗಳು, 75ರ ಸಾಧನೆಗಳು, 75ರ ಕ್ರಿಯೆಗಳು ಹಾಗೂ 75ರ ಪರಿಹಾರ ಎನ್ನುವ ಐದು ಅಂಶಗಳತ್ತ ನಮ್ಮ ಮುಂದಿನ ರೂಪುರೇಶೆಯಾಗಿರುತ್ತದೆ. ಸ್ವಾತಂತ್ರ್ಯದ ಆಶಯವನ್ನು ಸರ್ವರಿಗೂ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ದೃಢತೆಯ ಹೆಜ್ಜೆಗಳನ್ನಿಡುವ, ಸಂಕಲ್ಪ ತೊಡುವ ದಿನ ಇದಾಗಿದೆ" ಎಂದು ಹೇಳಿದರು.
"ಗಾಂಧೀಜಿ- ನೇತಾಜಿ, ಪಟೇಲ್- ಸಾವರ್ಕರ್ ರಂತಹ ಮಹಾನ್ ನಾಯಕರ ಮುಂದಾಳ್ವತದಲ್ಲಿ ಕರಾವಳಿಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಮಹತ್ವದ ಪಾತ್ರ ವಹಿಸಿತ್ತು. ತಿಲಕ್ರಿಂದ ಪ್ರೇರಿತರಾಗಿ, ಸೇವಾದಳದ ಮುಖ್ಯಸ್ಥರಾಗಿ, ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದ ಸಂಘಟಕರಾಗಿ, ಕಸ್ತೂರಬಾ ಟ್ರಸ್ಟ್ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮಹಾನ್ ಸ್ವಾತಂತ್ರ್ಯ ಪ್ರೇಮಿ ಉಮಾ ಬಾಯಿ ಕುಂದಾಪುರ ಅವರ ನಿಸ್ವಾರ್ಥ ಸೇವಾ ಪರಂಪರೆ, ಇಲ್ಲಿನ ನಾಗರೀಕರೆಲ್ಲರಿಗೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿ" ಎಂದು ಎಸಿ ಕೆ. ರಾಜು ಅವರು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮಾತನಾಡಿ, "ಗಾಂಧೀಜಿಯವರ ಅಹಿಂಸಾ ಚಳುವಳಿಯಿಂದ ಆರಂಭಗೊಂಡು, ಭಗತ್ಸಿಂಗ್ರಂತಹ ಯುವಕರ ಕ್ರಾಂತಿಕಾರಿ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಇವರಂತಹ ಇನ್ನೂ ಅನೇಕ ಮಹಾನ್ ದೇಶಭಕ್ತರ ತ್ಯಾಗ, ಬಲಿದಾನವನ್ನು ನಾವೆಲ್ಲರೂ ನೆನೆಯುವ ದಿನವಿದು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ., ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್, ಸದಸ್ಯರಾದ ದೇವಕಿ ಸಣ್ಣಯ್ಯ, ಪುಷ್ಪಾ ಶೇಟ್, ಪ್ರಭಾಕರ್ ವಿ., ಸಂತೋಷ್ ಕುಮಾರ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಶ್ವೇತಾ ಸಂತೋಷ್, ವನಿತಾ ಎಸ್. ಬಿಲ್ಲವ, ಅಬು ಮಹಮ್ಮದ್, ಚಂದ್ರಶೇಖರ್ ಖಾರ್ವಿ, ಗಿರೀಶ್, ರತ್ನಾಕರ್ ಸೇರೆಗಾರ್, ಕಮಲಾ ಮಂಜುನಾಥ್ ಪೂಜಾರಿ, ಶ್ರೀಧರ ಶೇರೆಗಾರ್, ನಗರ ಠಾಣೆ ಎಸ್ಐ ಸದಾಶಿವ ಗವರೋಜಿ, ಗ್ರಾಮಾಂತರ ಠಾಣೆ ಎಸ್ಐಗಳಾದ ಸುಧಾ ಪ್ರಭು, ನಿರಂಜನ್, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಧಿಗಳು, ಶಿಕ್ಷಕರು, ಕೊರೊನಾ ವಾರಿಯರ್ಸ್, ಸಾರ್ವಜನಿಕರು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕೆ.ಎಸ್. ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕೊರೊನಾ ವಾರಿಯರ್ಸ್ಗೆ ಸಮ್ಮಾನ:
ಕೊರೊನಾ ವಾರಿಯರ್ಸ್ಗಳಾದ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ನಯನಾ, ಬಿದ್ಕಲ್ಕಟ್ಟೆಯ ಆಶಾ ಕಾರ್ಯಕರ್ತೆ ಅನ್ನಪೂರ್ಣ, ಕೋಡಿಯ ಆಶಾ ಕಾರ್ಯಕರ್ತೆ ಸಾಧು, ಪುರಸಭೆಯ ಪೌರ ಕಾರ್ಮಿಕರಾದ ರಾಜೇಶ್, ಸಂತೋಷ್, ಕಂದಾಯ ಇಲಾಖೆಯ ಜಪ್ತಿ ಗ್ರಾಮ ಕರಣಿಕ ಪ್ರಕಾಶ ಸುವರ್ಣ, ಹೊಂಬಾಡಿ- ಮಂಡಾಡಿ ಗ್ರಾಮ ಸಹಾಯಕ ಭೋಜ ಮೊಗವೀರ, ಕುಂದಾಪುರ ನಗರ ಠಾಣಾ ಎಎಸ್ಐ ಸುಧಾಕರ್, ಗಂಗೊಳ್ಳಿ ಪಿಡಿಒ ಉಮಾಶಂಕರ್ ಅವರನ್ನು ಸಮ್ಮಾನಿಸಲಾಯಿತು.