ಉಡುಪಿ, ಜೂ.22(DaijiworldNews/AA): ಚಾಕು ತೋರಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿದ ಆರೋಪಿಗಳು ಅವರಲ್ಲಿದ್ದ 1 ಲಕ್ಷ ರೂ. ಹಣವನ್ನು ದೋಚಿದ್ದಲ್ಲದೇ ಜೀವಬೆದರಿಕೆಯೊಡ್ಡಿರುವ ಘಟನೆ ಜೂನ್ 20ರಂದು ಉಡುಪಿ ನಗರದಲ್ಲಿ ನಡೆದಿದೆ.

ಆತ್ರಾಡಿಯ ಮಹಮ್ಮದ್ ನಿಹಾಲ್ ಎಂಬುವವರನ್ನು ಅಪಹರಿಸಿ ಅವರ ಬಳಿಯಿದ್ದ ಹಣವನ್ನು ಆರೋಪಿಗಳು ಲೂಟಿ ಮಾಡಿದ್ದಾರೆ.
ಮಹಮ್ಮದ್ ನಿಹಾಲ್ ಅವರು ಬಸ್ನ ಕಲೆಕ್ಷನ್ ವ್ಯವಹಾರ ಮಾಡಿಕೊಂಡಿದ್ದು, ಜೂ. 20ರಂದು ಬಸ್ನ ಕಲೆಕ್ಷನ್ ಹಣವನ್ನು ತೆಗೆದುಕೊಂಡು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬೇಕರಿ ಬಳಿ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಲವಂತವಾಗಿ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಬಳಿಕ ಮಹಮ್ಮದ್ ನಿಹಾಲ್ ಅವರಿಗೆ ಚಾಕು ತೋರಿಸಿ, ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಅವರಲ್ಲಿದ್ದ ಹಣವನ್ನು ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಆರೋಪಿಗಳನ್ನು ಶಾರೀಕ್, ಇರ್ಫಾನ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಇನ್ನೂ ಇಬ್ಬರು ಅಪರಿಚಿತರು ಇದ್ದರು ಎಂದು ಮಹಮ್ಮದ್ ನಿಹಾಲ್ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.